ಬೆಳಗಾವಿ: ಅದು ಶಿಕ್ಷಣ ವಂಚಿತ ಕುಗ್ರಾಮವಾಗಿತ್ತು. ಆದರೆ ಆ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರದಿಂದ ಈಗ ಇಡೀ ಗ್ರಾಮದ ಚಿತ್ರಣವೇ ಬದಲಾಗಿದೆ. ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು, ರಾಜ್ಯದಲ್ಲೇ ಅತೀ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಗ್ಗಳಿಕೆಯನ್ನು ಈ ಗ್ರಾಮ ಪಡೆದುಕೊಂಡಿದೆ. ಶಿಕ್ಷಕರ ದಿನಾಚರಣೆ ನಿಮಿತ್ತ ಈ ವಿಶೇಷ ವರದಿ ನಿಮಗಾಗಿ.
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_shale.png)
ಹೌದು, ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು ಸಿಗುತ್ತಾರೆ. ರಾಜ್ಯದ ವಿವಿಧೆಡೆ ಐನೂರಕ್ಕೂ ಹೆಚ್ಚು ಶಿಕ್ಷಕರು ಅಕ್ಷರ ಕಲಿಸುವ ಮೂಲಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅಷ್ಟಕ್ಕೂ ಇಂಚಲ ಗ್ರಾಮ ಶಿಕ್ಷಕರ ತವರೂರಾಗಲು ಇಲ್ಲಿನ ಸಿದ್ಧಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರೇ ಕಾರಣ.
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_sarswati.png)
1969ರಲ್ಲಿ ಅಂದಿನ ಸಿದ್ದರಾಮ ಶಿವಯೋಗಿಗಳು ಶಿವಾನಂದ ಭಾರತಿ ಸ್ವಾಮೀಜಿ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದರು. ಪಟ್ಟಕ್ಕೆ ಏರಿದ ಮುಂದಿನ ವರ್ಷವೇ ಗ್ರಾಮದಲ್ಲಿ ವೇದಾಂತ ಪರಿಷತ್ ಆಯೋಜಿಸಿದ್ದರು. ತೀರಾ ಹಿಂದುಳಿದ ಗ್ರಾಮವನ್ನು ಸುಧಾರಣೆ ಮಾಡಬೇಕಾದರೆ ಏನು ಮಾಡಬೇಕೆಂದು ಯೋಚಿಸಿ ಇಲ್ಲಿನ ಜನರಿಗೆ ಶಿಕ್ಷಣ ನೀಡಬೇಕೆಂದು ನಿರ್ಧರಿಸಿದರು. ಅದರಂತೆ 1975ರಲ್ಲಿ ಶಿವಯೋಗೀಶ್ವರ ಪ್ರೌಢಶಾಲೆ, 1982ರಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದರು.
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_shalele.png)
ಬೆಂಗಳೂರಿನಲ್ಲೂ ಕೂಡ ಶ್ರೀಮಠದಿಂದ ಶಾಂತಾನಂದ ಪ್ರೌಢಶಾಲೆ ಆರಂಭಿಸಲಾಗಿದೆ. ಪಿಯುಸಿಯಲ್ಲಿ ಶಿಕ್ಷಣ ಶಾಸ್ತ್ರ ವಿಷಯ ತೆಗದುಕೊಂಡು ಪಿಯುಸಿ ಪೂರ್ಣಗೊಳಿಸಿದವರಿಗೆ ಶಿಕ್ಷಕರ ಮಧ್ಯಂತರ ತರಬೇತಿ ಪ್ರಾರಂಭಿಸಿ ಅದರ ಮೂಲಕ ಶಿಕ್ಷಕರ ಆಯ್ಕೆ ಪ್ರಾರಂಭವಾಯಿತು. ಬಳಿಕ 1983-84ರಲ್ಲಿ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಟಿಸಿಎಚ್ ಕಾಲೇಜು ವತಿಯಿಂದ ಇಂಚಲದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಶಿಬಿರದಿಂದ ಪ್ರಭಾವಿತರಾದ ಡಾ. ಶಿವಾನಂದ ಭಾರತಿ ಸ್ವಾಮೀಜಿ 1986ರಲ್ಲಿ ಶ್ರೀಮಠದಿಂದ ಟಿಸಿಎಚ್ ಕಾಲೇಜು ಆರಂಭಿಸಿದರು. ಪ್ರಾರಂಭದಲ್ಲಿ ಉಚಿತ ಪ್ರವೇಶ ನೀಡಿದ್ದರಿಂದ ಹೆಚ್ಚು ವಿದ್ಯಾರ್ಥಿಗಳು ಟಿಸಿಎಚ್ ಅಭ್ಯಸಿಸಲು ಪ್ರೇರಣೆಯಾಯಿತು ಎಂಬುದು ಗ್ರಾಮಸ್ಥರ ಮಾತು.
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_sesesddf.png)
ಒಂದೇ ವರ್ಷ 50 ಶಿಕ್ಷಕರು ಆಯ್ಕೆ: 1988ರಿಂದ ಪ್ರತಿ ಆಯ್ಕೆಯಲ್ಲೂ ಸರಾಸರಿ 20ಕ್ಕೂ ಹೆಚ್ಚು ಶಿಕ್ಷಕರು ಈ ಗ್ರಾಮದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ. ಇನ್ನು ಇಲ್ಲಿ ತರಬೇತಿ ಪಡೆದ 7 ಸಾವಿರ ಶಿಕ್ಷಕರ ಪೈಕಿ ಶೇ. 99ರಷ್ಟು ಶಿಕ್ಷಕರು ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1997ರ ಬ್ಯಾಚಿನಲ್ಲಿ ಕರಿಗಾರ ಮನೆತನದ ಏಳು ಶಿಕ್ಷಕರು ನೇಮಕಾತಿ ಆಗಿದ್ದರು. ಆ ವರ್ಷ ಇಂಚಲ ಗ್ರಾಮದ 50 ಜನ ಶಿಕ್ಷಕರಾಗಿ ನೇಮಕಾತಿ ಆಗಿದ್ದು ದಾಖಲೆಯೇ ಸರಿ. ಅಲ್ಲದೇ ಕರಿಗಾರ ಮನೆತನದಲ್ಲಿ ಒಟ್ಟು 15, ಗಾಣಗಿ, ರಾಯನಾಯ್ಕರ, ಮಿರ್ಜನ್ನವರ, ಬಡ್ಲಿ, ಜಂಬಗಿ ಸೇರಿ ಗ್ರಾಮದ ಇನ್ನಿತರ ಮನೆತನಗಳಲ್ಲಿ ಅತೀ ಹೆಚ್ಚು ಶಿಕ್ಷಕರಿದ್ದಾರೆ.
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_shales.png)
350ಕ್ಕೂ ಹೆಚ್ಚು ಯೋಧರು: ಕೇವಲ ಶಿಕ್ಷಕರಷ್ಟೇ ಅಲ್ಲದೇ ಇಂಚಲ ಗ್ರಾಮದ 350ಕ್ಕೂ ಹೆಚ್ಚು ಯೋಧರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮದ ಎಂ.ಡಿ. ಮಲ್ಲೂರ, ಸಿದ್ದರಾಮ ಮಾರಿಹಾಳ, ಶಬ್ಬೀರ ಅಹಮ್ಮದ ಸೈಯದ್, ಮಲ್ಲಪ್ಪ ರಾಹುತನವರ, ಡಾ. ಅಬ್ದುಲ್ ರಸೀದ್ ಮಿರ್ಜನ್ನವರ ಸೇರಿ ಐವರು ಕೆಎಎಸ್ ಅಧಿಕಾರಿಗಳಿದ್ದಾರೆ. ಬ್ರಿಗೇಡಿಯರ್ ಯಲ್ಲನಗೌಡ ದೊಡ್ಡನಾಯ್ಕ ಮಲ್ಲೂರ, ಮೇಜರ್ ಸಿದ್ದರಾಮ ಜಂಬಗಿ ಸೇನೆಯಲ್ಲಿ ಅತ್ಯುನ್ನತ ಹುದ್ದೆಯಲ್ಲಿದ್ದು, ಇಂಚಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಲ್ಲದೇ ಇಲ್ಲಿ ಕಲಿತ ಬೇರೆ ಗ್ರಾಮಗಳ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ನಿವೃತ್ತ ಉಪನ್ಯಾಸಕ ಎಸ್.ಎಂ. ಬಡ್ಲಿ ಅವರು, ಪ್ರಾಥಮಿಕ ಶಾಲೆಯಿಂದ ಆಯುರ್ವೇದ ಮಹಾವಿದ್ಯಾಲಯವರೆಗೂ ಅಂಗ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಡಾ. ಶಿವಾನಂದ ಭಾರತಿ ಅಪ್ಪಾಜಿ ಅವರೇ. ಈಚಲಮರದಡಿ ಅಗೋಚರವಾಗಿದ್ದ ಇಂಚಲವನ್ನು ರಾಜ್ಯದಲ್ಲೇ ಮಾದರಿ ಗ್ರಾಮವನ್ನಾಗಿ ರೂಪಿಸಿದ್ದಾರೆ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಸೋಮಲಿಂಗ ಶಿವಪ್ಪ ಮೆಟಗಟ್ಟಿ ಅವರು ಮಾತನಾಡಿ, ಡಾ. ಶಿವಾನಂದ ಸ್ವಾಮೀಜಿ ಅವರು ಬರುವ ಮುಂಚೆ ಪ್ರೌಢ ಶಿಕ್ಷಣ ಪಡೆದವರು ಬೆರಳಣಿಕೆ ಸಂಖ್ಯೆಯಲ್ಲಿದ್ದರು. ಕಾಲೇಜು ಸೇರಿ ಮುಂದಿನ ಶಿಕ್ಷಣದ ಗೋಜಿಗೆ ಯಾರೂ ಹೋಗ್ತಿರಲಿಲ್ಲ. ಶೈಕ್ಷಣಿಕವಾಗಿ ಇಂಚಲವೂ ಆಗ ಬಹಳಷ್ಟು ಹಿಂದುಳಿದಿತ್ತು. ಇಂತಹ ಗ್ರಾಮದ ದಿಕ್ಕನ್ನೇ ಸ್ವಾಮೀಜಿ ಬದಲಿಸಿ, ಶಿಕ್ಷಕರ ತವರೂರನ್ನಾಗಿ ಮಾಡಿದ್ದು ನಮಗೆಲ್ಲಾ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ನಿವೃತ್ತ ಉಪನ್ಯಾಸಕ ಆರ್.ಸಿ.ರಾಯನಾಯ್ಕರ ಮಾತನಾಡಿ, ಅಂದು ಡಾ. ಶಿವಾನಂದ ಭಾರತಿ ಅಜ್ಜನವರು ಟಿಸಿಎಚ್ ಕೋರ್ಸ್ ಆರಂಭಿಸುವ ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮವೇ ಇಂದು ಇಷ್ಟೊಂದು ಸಂಖ್ಯೆಯಲ್ಲಿ ಶಿಕ್ಷಕರು ಆಯ್ಕೆಯಾಗಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಅಜ್ಜನವರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಎಲ್ಲ ಶಿಕ್ಷಕರಿಗೂ ಸಲ್ಲುತ್ತದೆ ಎಂದರು.
ಒಟ್ಟಿನಲ್ಲಿ ಒಬ್ಬ ಗುರು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇಂಚಲದ ಡಾ. ಶಿವಾನಂದ ಭಾರತಿ ಸ್ವಾಮೀಜಿ ಅವರೇ ಸಾಕ್ಷಿ. ಜಾತಿ, ಧರ್ಮಗಳ ಕಚ್ಚಾಟದಲ್ಲಿ ತೊಡಗಿರುವ ಅದೆಷ್ಟೋ ಪೀಠಾಧಿಪತಿಗಳ ನಡುವೆ ಸದ್ದು ಗದ್ದಲವಿಲ್ಲದೇ ಶೈಕ್ಷಣಿಕ ಕ್ರಾಂತಿಗೈದಿರುವ ಇಂಚಲದ ಶಿವಯೋಗಿಗಳಿಗೆ ಸಾವಿರದ ಶರಣು..
![Teachers day Special Teacher hometown is Inchal village Inchal village in Belagavi district ಶಿಕ್ಷಕರ ತವರೂರು ಇಂಚಲ ಸ್ವಾಮೀಜಿಯ ಶೈಕ್ಷಣಿಕ ಕ್ರಾಂತಿಗೆ ಉಘೇ ಉಘೇ ಗ್ರಾಮದಲ್ಲಿ ಇಂಚಿಂಚಿಗೂ ಮೇಷ್ಟ್ರು ಇಂದು ಶಿಕ್ಷಕರ ದಿನಾಚರಣೆ ಶಿಕ್ಷಣ ವಂಚಿತ ಕುಗ್ರಾಮ ಸ್ವಾಮೀಜಿ ಅಂದು ತೆಗೆದುಕೊಂಡ ನಿರ್ಧಾರ ಶಿಕ್ಷಕರ ತವರೂರಾಗಿ ಮಾರ್ಪಟ್ಟಿದ್ದು ಇಂಚಲ ಗ್ರಾಮದಲ್ಲಿ ಇಂಚಿಂಚಿಗೂ ಶಿಕ್ಷಕರು](https://etvbharatimages.akamaized.net/etvbharat/prod-images/05-09-2023/19432418_sesesed.png)
ಓದಿ: ಶಿಕ್ಷಕರ ದಿನಾಚರಣೆ: ವಿಧಾನಸೌಧದಲ್ಲಿ ಅದ್ದೂರಿ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಸಮಾರಂಭ