ಬೆಳಗಾವಿ: ಕೊರೊನಾ ಸೋಂಕಿನಿಂದ ನಿಧನರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ನೆನೆದು ತಾಯಿ ಸೋಮವ್ವ ಅಂಗಡಿ ಕಣ್ಣೀರು ಹಾಕಿದರು.
ನಗರದ ವಿಶ್ವೇಶ್ವರಯ್ಯ ನಗರದ ನಿವಾಸದಲ್ಲಿ ಮಾತನಾಡಿದ ಅವರು, ಮುಂಗಾರು ಅಧಿವೇಶನಕ್ಕೆಂದು ದೆಹಲಿಗೆ ಹೋಗುವ ಮುನ್ನ ಕೆ.ಕೆ. ಕೊಪ್ಪಕ್ಕೆ ಬಂದು ಭೇಟಿಯಾಗಿ ತೆರಳಿದ್ದ. ಊಟ ಮಾಡಪ್ಪ ಅಂದ್ರೆ ಅರ್ಧ ಕಪ್ ಚಹಾ ಕುಡಿದು ಹೋಗಿದ್ದ. ಯಾವಾಗ ಬರ್ತಿ ಅಂತ ಕೇಳಿದ್ದಕ್ಕೆ ತಿಂಗಳ ಬಳಿಕ ಮರಳಿ ಬರುತ್ತೇನೆ ಅಂದಿದ್ದ. ಅಷ್ಟೊಂದು ದಿನ ಅಲ್ಲಿ ಇರಬೇಡ ಅಂದಿದಕ್ಕೆ ಪಾರ್ಲಿಮೆಂಟ್ನಾಗ ರೊಕ್ಕಾ ಇಲ್ಲಮ, ನಾನು ಹೋಗ್ಬೇಕು, ಅಲ್ಲೇ ಇರಬೇಕು ಎಂದಿದ್ದ. ಒಂದು ತಿಂಗಳ ಬಳಿಕ ಬಂದು ಭೇಟಿಯಾಗ್ತೀನಿ ಅಂದವ ಬಾರದ ಲೋಕಕ್ಕೆ ಹೋಗಿದ್ದಾನೆ. ಒಂದು ತಿಂಗಳವರೆಗೆ ಹೋಗಬೇಡ ಮಗನೆ ಎಂದಿದ್ದೆ ಎಂದು ಮಗನನ್ನ ನೆನೆದು ತಾಯಿ ಕಣ್ಣೀರು ಹಾಕಿದರು.
ಹಳ್ಳಿಯಿಂದ ಬೆಳಗಾವಿಗೆ ಬಂದು ಶಾಲೆ ಕಲಿತು ದೊಡ್ಡ ಮನುಷ್ಯನಾಗಿದ್ದ. ನನ್ನ ಮಾತು ಆತ ಎಂದಿಗೂ ಮೀರುತ್ತಿರಲಿಲ್ಲ. ನನ್ನ ಮಗ ಊರಾಗ ದೊಡ್ಡ ಸಾಲಿ, ಬಸವಣ್ಣನ ಗುಡಿ ಕಟ್ಟಿಸಿದ್ದ. ಜನರಿಗಾಗಿ ಸಾಕಷ್ಟು ಕೆಲಸ ಮಾಡಿದ್ದ. ಊರಾಗ ಪೈಪ್ಲೈನ್ ಮಾಡಿಸಿದ್ದ. ನನ್ನ ಹೆಸರಲ್ಲಿ ಶಾಲೆನೂ ಕಟ್ಟಿಸಿ, ಹಳ್ಳಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದ ಎಂದು ತಾಯಿ ಸೋಮವ್ವ ಮಗನ ಕಾರ್ಯವನ್ನು ನೆನೆಸಿಕೊಂಡರು.