ಚಿಕ್ಕೋಡಿ : ಕರ್ನಾಟಕ ರಾಜ್ಯಕ್ಕೆ ನೀರು ಬಿಡ್ತಿರುವುದನ್ನ ವಿರೋಧಿಸಿ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಸಿಎಂ ದೇವೇಂದ್ರ ಫಡ್ನವಿಸ್ಗೆ ಪತ್ರ ಬರೆದ ಸತಾರಾ ಜಿಲ್ಲೆಯ ಪಾಟಣ್ ಕ್ಷೇತ್ರದ ಶಾಸಕ ಶಂಭುರಾಜ ದೇಸಾಯಿ ಅವರು, ಕೃಷ್ಣಾ ನದಿಗೆ ಕೊಯ್ನಾ ಡ್ಯಾಂನಿಂದ ನೀರು ಬಿಡುಗಡೆ ಮಾಡದಂತೆ ಪತ್ರ ಬರೆದಿದ್ದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಕೊಯ್ನಾ ಡ್ಯಾಂನಲ್ಲಿ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಹೊಂದಿದ್ದು. ಈಗ ಕೊಯ್ನಾ ಡ್ಯಾಂನಲ್ಲಿ ಪ್ರಸ್ತುತ 36.89 ಟಿಎಂಸಿ ನೀರು ಸಂಗ್ರಹ ಹೊಂದಿದೆ.
ಕರ್ನಾಟಕದಲ್ಲಿ ಬತ್ತಿ ಬರಿದಾಗಿರೋ ಕೃಷ್ಣಾ ನದಿ, ಕುಡಿಯುವ ನೀರಿಗಾಗಿ ಹಾಹಾಕಾರ ಎದುರಿಸುತ್ತಿದ್ದು, ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಹರಿಯುವ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೀರು ಬಿಡದಂತೆ ಶಿವಸೇನೆ ಶಾಸಕ ಶಂಭುರಾಜ ದೇಸಾಯಿ ಮೇ 8 ರಂದು ಸಿಎಂ ಫಡ್ನವಿಸ್ಗೆ ಪತ್ರ ಬರೆದಿದ್ದಾರೆ. ಶಿವಸೇನೆಯ ಈ ನಡೆಗೆ ವ್ಯಾಪಕ ಖಂಡನೆ ವ್ಯಕ್ತಪಡಿಸಿರುವ ರೈತರು, ಮತ್ತೆ ನೀರಿಗಾಗಿ ಬೀದಿಗಿಳಿಯಲು ಮುಂದಾಗಿದ್ದಾರೆ.