ಬೆಳಗಾವಿ: ನಮ್ಮ ಯೋಜನೆಗಳ ನೇಮ್ ಪ್ಲೇಟ್ ಚೇಂಜ್ ಮಾಡಿ ತನ್ನ ಸಾಧನೆ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿ ನಾಯಕರು ಇಂದಿರಾ ಕ್ಯಾಂಟೀನ್ ಹೆಸರನ್ನು ಚೇಂಜ್ ಮಾಡಲ್ಲ ಎಂಬ ವಿಶ್ವಾಸ ಇದೆ. ಹಿಂದೆ ಯಡಿಯೂರಪ್ಪ ಇದ್ದಾಗಲೂ ಹೇಳಿದ್ದರು. ಆದರೆ ಹೆಸರು ಬದಲಾಯಿಸಿರಲಿಲ್ಲ. ಹೆಸರು ಚೇಂಜ್ ಮಾಡೋದರಿಂದ ಏನು ದೊಡ್ಡ ಬದಲಾವಣೆ ಆಗಲ್ಲ. ಇಂದಿರಾ ಗಾಂಧಿ ಹೆಸರಲ್ಲೇ ಮುಂದುವರೆಯಬೇಕೆಂಬ ಆಸೆ ನಮ್ಮದು ಎಂದರು.
ಪಿಎಂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ:
ಕ್ಯಾಂಟೀನ್ ನಮ್ಮ ಯೋಜನೆಯಾಗಿರುವುದರಿಂದ ಅನುದಾನ ಕೊಡ್ತಿಲ್ಲ. ಏಳು ವರ್ಷದಲ್ಲಿ ಯಾವುದೇ ಹೇಳುವಂತಹ ಯೋಜನೆಯನ್ನು ಮೋದಿ ಮಾಡಿಲ್ಲ. ಹೀಗಾಗಿ ನಮ್ಮ ಯೋಜನೆಗಳ ನೇಮ್ ಪ್ಲೇಟ್ ಚೇಂಜ್ ಮಾಡಿ ಅದು ತನ್ನ ಸಾಧನೆ ಎಂದು ಪಿಎಂ ಮೋದಿ ಹೇಳ್ತಿದ್ದಾರೆ. ಮೋದಿಯವರು ತಾವು ಮಾಡಿದ ಸಾಧನೆ ದೇಶಕ್ಕೆ ತೋರಿಸುವ ಯೋಜನೆ ಯಾವುದೂ ಇಲ್ಲ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ. ಹೆಸರು ಬದಲಾವಣೆಯಿಂದ ಜನ ಏನೂ ಮೋಸ ಹೋಗಲ್ಲ ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.
ಓದಿ: ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಲು ಬಿಜೆಪಿ ಮುಂದಾದ್ರೇ ಉಗ್ರ ಪ್ರತಿಭಟನೆ : ಸತೀಶ್ ಜಾರಕಿಹೊಳಿ
ಸಂಪುಟ ರಚನೆಯಾದ್ರೂ ಸರ್ಕಾರ ರಚನೆಯಾಗಿಲ್ಲ:
ಅತಿವೃಷ್ಟಿ ಪ್ರದೇಶಗಳು ಸಹಜ ಸ್ಥಿತಿಗೆ ಬಂದರೂ ಸರ್ಕಾರ ಮಾತ್ರ ಇನ್ನೂ ಸರಿಯಾಗಿ ರಚನೆ ಆಗಿತ್ತಿಲ್ಲ. ಪ್ರತಿಪಕ್ಷವಾಗಿ ನೆರೆ ಪರಿಹಾರಕ್ಕೆ ಆಗ್ರಹಿಸಿ ಹೋರಾಟ ಮಾಡುತ್ತೇವೆ. 2019ರಲ್ಲೂ ಹೋರಾಟ ಮಾಡಿದ್ವಿ, ಈಗಲೂ ವಿಧಾನಸೌಧ ಒಳಗೆ, ಹೊರಗೆ ಹೋರಾಟ ಮಾಡ್ತೇವೆ. ಖಾತೆ ಹಂಚಿಕೆ ಕುರಿತು ನೂತನ ಸಚಿವರಿಂದ ಕ್ಯಾತೆ ತೆಗೆಯುತ್ತಿದ್ದು, ಅದನ್ನು ಸಿಎಂ ಸರಿಪಡಿಸಬೇಕು. ಸರ್ಕಾರದಲ್ಲಿ ಯಾವುದೇ ಕೆಲಸ ಸರಿಯಾಗಿ ಕೆಲಸ ಆಗುತ್ತಿಲ್ಲ. ತಮ್ಮ ಆಂತರಿಕ ಸಮಸ್ಯೆಯಲ್ಲಿಯೇ ಸರ್ಕಾರ ಇದೆ. ಸಚಿವ ಸ್ಥಾನ ಕೊಟ್ಟರೂ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಇದೆ. ಇದು ಖಂಡಿತವಾಗಿ ಸರ್ಕಾರದ ಮೇಲೆ ಪರಿಣಾಮ ಬೀರೇ ಬೀರುತ್ತದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ರು.
ಓದಿ:ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ಕೆಂಡಾಮಂಡಲ