ಚಿಕ್ಕೋಡಿ (ಬೆಳಗಾವಿ) : ಮೌಢ್ಯಕ್ಕೆ ಸೆಡ್ಡು ಹೊಡೆದು ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜನಜಾಗೃತಿ ಮೂಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಅಮಾವಾಸ್ಯೆ ಹಾಗೂ ಸೂರ್ಯ ಗ್ರಹಣ ಜೊತೆಗೆ ರಾಹು ಕಾಲದಲ್ಲಿಯೇ ತಮ್ಮ ಪುತ್ರನೊಂದಿಗೆ ಆಗಮಿಸಿ ಸರಳವಾಗಿ ಹುಕ್ಕೇರಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಇದನ್ನೂ ಓದಿ : ಕ್ರಿಮಿನಲ್ಗಳ ಜೊತೆ ಶಾಮೀಲಾದವರನ್ನ ಕಾಂಗ್ರೆಸ್ ಸ್ಟಾರ್ ಪ್ರಚಾರಕ್ಕರನ್ನಾಗಿಸಿದೆ: ಶೋಭಾ ಕರಂದ್ಲಾಜೆ ಆರೋಪ
ನಾಮಪತ್ರ ಸಲ್ಲಿಸಿದ ಬಳಿಕ, ನೀವು ಮೌಢ್ಯ ವಿರೋಧ ಮಾಡಿದರೆ ಬಿಜೆಪಿಯವರು ನಿಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಸ್ವಾಭಾವಿಕ. ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಲೇಬೇಕಾಗುತ್ತದೆ. ಅವರು ಬೇರೆಯವರಿಗೂ ವಿರೋಧ ಮಾಡುತ್ತಾರೆ. ನಮಗೊಬ್ಬರಿಗೆ ಮಾತ್ರ ಅಲ್ಲ. ಕರ್ನಾಟದಲ್ಲಿ ನಾನು ಟಾಪ್ ಟೆನ್ನಲ್ಲಿ ಆಯ್ಕೆ ಆಗುತ್ತೇನೆ" ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಸತೀಶ್ ಜಾರಕಿಹೊಳಿ ಒಬ್ಬ ಹಿಂದೂ ವಿರೋಧಿ ಎಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, "ಈ ಬಾರಿ ಎಷ್ಟು ವೋಟ್ ಬರುತ್ತೆ ಎಂದು ಗೊತ್ತಾಗುತ್ತದೆ. ನಮ್ಮ ಪರವಾಗಿ ಎಷ್ಟು ಹಿಂದುಗಳಿದ್ದಾರೆ ಎಂದೂ ಗೊತ್ತಾಗುತ್ತದೆ. ಮೇ 13 ನೇ ತಾರೀಕು 11 ಗಂಟೆಗೆ ಮತಗಳ ಮೂಲಕವೇ ಉತ್ತರ ಕೊಡುತ್ತೇವೆ" ಎಂದರು.
ಅಥಣಿಗೆ ಮೋದಿ ಬರುವ ವಿಚಾರ..: ಎಲೆಕ್ಷನ್ ಗೆಲ್ಲೋಕೆ ಎಲ್ಲರೂ ಪ್ರಯತ್ನ ಮಾಡುತ್ತಾರೆ. ಅವರ ಪಕ್ಷದ ಅಭ್ಯರ್ಥಿ ಪರವಾಗಿ ಮೋದಿ ಪ್ರಚಾರ ಮಾಡಲಿ. ನಮ್ಮ ಅಭ್ಯರ್ಥಿ ಪರವಾಗಿ ನಾವು ಅಥಣಿ ಮತ್ತು ಕಾಗವಾಡಕ್ಕೆ ಹೋಗಿ ಪ್ರಚಾರ ಮಾಡುತ್ತೇವೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಚೇತ್ರಗಳಲ್ಲಿ ನಮ್ಮ ಜವಾಬ್ದಾರಿ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ: ಇಷ್ಟೆಲ್ಲಾ ಮಾತಾಡುವ ಕಾಂಗ್ರೆಸ್ ಲಿಂಗಾಯತ ಸಿಎಂ ಘೋಷಿಸಲಿ: ಸೋಮಣ್ಣ ಸವಾಲ್