ಬೆಳಗಾವಿ: ಸವದತ್ತಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಅಥವಾ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಲಿಕ್ಕೆ ಆಗೋದಿಲ್ಲ. ಜನವರಿ ನಂತರ ರಾಜಕೀಯ ಸನ್ನಿವೇಶಗಳು ಬಹಳಷ್ಟು ಬದಲಾವಣೆ ಆಗುತ್ತದೆ. ಜನವರಿ ನಂತರ ಈ ಬಗ್ಗೆ ಖಚಿತವಾಗಿ ಹೇಳುತ್ತೇವೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಸವದತ್ತಿಯಲ್ಲಿ ನಾವು ಗ್ರೌಂಡ್ ರೆಡಿ ಮಾಡ್ತಿದ್ದೇವೆ. ಸ್ಥಳೀಯರು ನಿಲ್ಲಬಹುದು. ಬೇರೆಯವರು ನಿಲ್ಲಬಹುದು. ಸ್ಥಳೀಯರಿಗೆ ನಿಲ್ಲಲಿಕ್ಕೆ ಅವಕಾಶವಿದೆ. ನಾವು ಹೇಳಿದ್ದೇವೆ. ನೀವು ಯಾರಾದರೂ ಒಬ್ಬರು ನಿಲ್ಲಲು ರೆಡಿಯಾಗಿ ಅಂತಾ ಹೇಳಿದ್ದೇವೆ. ಇಬ್ಬರು ನಿಂತರೂ ಬರೋದಿಲ್ಲ ಅಂತಾ ಹೇಳಿದ್ದೇವೆ. ಯಾರೇ ನಿಂತರೂ ನಾವು ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಸವದತ್ತಿ ಕ್ಷೇತ್ರದಿಂದ ಸತೀಶ್ ಜಾರಕಿಹೊಳಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂತಹ ವಿಚಾರ ಸದ್ಯಕ್ಕಿಲ್ಲ. ಮುಂದೆ ಹೇಳೋಕ್ಕಾಗಲ್ಲ. ಕಾಂಗ್ರೆಸ್ ಪಕ್ಷದ ನೆಲೆ ಗಟ್ಟಿ ಮಾಡಲು ನಾವು ಓಡಾಡುತ್ತಿದ್ದೇವೆ. ಮೊದಲ ಆದ್ಯತೆ ಸ್ಥಳೀಯ ಅಭ್ಯರ್ಥಿಗಳಿಗಿದೆ. ಅವರು ಹೊಂದಾಣಿಕೆಯಾದರೆ ನಿಲ್ಲಬಹುದು. ಇಲ್ಲದೇ ಸವದತ್ತಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಲಿಕ್ಕೆ ಆಗೋದಿಲ್ಲ. ಜನವರಿ ನಂತರ ರಾಜಕೀಯ ಸನ್ನಿವೇಶಗಳು ಬಹಳಷ್ಟು ಬದಲಾವಣೆ ಶುರು ಆಗುತ್ತದೆ. ಜನವರಿ ನಂತರ ಈ ಬಗ್ಗೆ ಖಚಿತವಾಗಿ ಹೇಳುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ, ಜನವರಿ ಬಳಿಕ ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರ್ತಾರಾ ಅಂತಾ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬರ್ತಾರೆ. ಈ ಕಡೆಯಿಂದ ಆ ಕಡೆ ಸ್ಟಾರ್ಟ್ ಆಗುತ್ತದೆ. ನಮ್ಮವರು ಕೆಲವರು ಹೋಗ್ತಾರೆ. ಬಿಜೆಪಿಯಿಂದ ನಮ್ಮ ಕಡೆ ಬರ್ತಾರೆ. ಜನವರಿಯಿಂದ ಬದಲಾವಣೆ ಪರ್ವ ಪ್ರಾರಂಭ ಆಗುತ್ತದೆ. ರಾಜ್ಯದಲ್ಲಿ, ಜಿಲ್ಲೆಯಲ್ಲಿ ನಮಗೆ ಹೆಚ್ಚಿನ ಸ್ಥಾನ ಬರುತ್ತದೆ. ಜನವರಿ ನಂತರ ಪಕ್ಕಾ ಗಾಳಿ ಪ್ರಾರಂಭ ಆಗುತ್ತದೆ. ಸವದತ್ತಿಯಲ್ಲಿ ಸ್ಥಳೀಯರಲ್ಲಿ ಹೊಂದಾಣಿಕೆ ಆಗದಿದ್ದರೆ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.
ವಿರೋಧ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ: ಸಿದ್ದರಾಮಯ್ಯೋತ್ಸವಕ್ಕೆ ಕೆಲ ಕಾಂಗ್ರೆಸ್ ನಾಯಕರ ಅಸಮಾಧಾನ ವಿಚಾರಕ್ಕೆ, ಇದು ಪಕ್ಷದ ವತಿಯಿಂದ ಮಾಡ್ತಿಲ್ಲ. ಖಾಸಗಿ ಗುಂಪಾಗಿ, ಔಟ್ಸೈಡ್ ದಿ ಪಾರ್ಟಿ ಇದೆ. ಹೀಗಾಗಿ, ವೈಯಕ್ತಿಕವಾಗಿ ಮಾಡುವ ಕಾರ್ಯಕ್ರಮಕ್ಕೆ ಯಾರೂ ವಿರೋಧ ಮಾಡಕ್ಕಾಗಲ್ಲ. ಪಕ್ಷ ಆದರೆ ಬೇರೆ ರೀತಿ ಇರುತ್ತದೆ. ಇದು ಪಕ್ಷಕ್ಕೂ ಅವರ ಹುಟ್ಟುಹಬ್ಬಕ್ಕೂ ಯಾವುದೇ ಸಂಬಂಧ ಇಲ್ಲ. ಅಭಿಮಾನಿಗಳ ಸಂಘದ ವತಿಯಿಂದ ಮಾಡುತ್ತಿದ್ದಾರೆ. ಹೀಗಾಗಿ, ಅದಕ್ಕೆ ಏನು ಹೇಳಕ್ಕಾಗಲ್ಲ. ವಿರೋಧ ಮಾಡುವ ಪ್ರಶ್ನೆಯೇ ಉದ್ಭವಿಸಲ್ಲ ಎಂದರು.
ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿದ್ದಾಗ ಆಗಬಾರದು. ಹೊರಗೆ ಇದ್ದಾಗ ಏನೂ ಮಾಡಕ್ಕಾಗಲ್ಲ. ಎಲ್ಲ ಪಕ್ಷಗಳಲ್ಲೂ ಆಗುತ್ತೆ. ಬಿಜೆಪಿ, ಜೆಡಿಎಸ್ನಲ್ಲೂ ವ್ಯಕ್ತಿ ಪೂಜೆ ಆಗುತ್ತದೆ. ಪಕ್ಷದ ಹೊರಗೆ ಬಂದಾಗ ವ್ಯಕ್ತಿಪೂಜೆ ಇದ್ದೇ ಇದೆ. ಅದನ್ನ ತಪ್ಪಿಸಲಿಕ್ಕೆ ಆಗಲ್ಲ. ಪಕ್ಷ ಅಂತಾ ಬಂದಾಗ ಪಕ್ಷ ಮೊದಲು ಅವರದ್ದೂ ಅಭಿಪ್ರಾಯ ಇದೆ. ನಮ್ಮದೂ ಅಭಿಪ್ರಾಯ ಅದೆ ಇದೆ ಎಂದರು.
ಪ್ರತ್ಯೇಕ ಸಭೆ ಅವಶ್ಯಕತೆ ಇಲ್ಲ: ಮತ್ತೊಂದು ಸುತ್ತಿನ ಅಹಿಂದ ಸಮಾವೇಶದ ಮುನ್ನುಡಿಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಇದು ಕೇವಲ ಸಿದ್ದರಾಮಯ್ಯರವರ ಹುಟ್ಟುಹಬ್ಬಕ್ಕೆ ಸೀಮಿತವಾಗಿದೆ. ಅಹಿಂದ ಪ್ರಶ್ನೆ ಅಲ್ಲ. ಕಾಂಗ್ರೆಸ್ ಪಕ್ಷವೇ ಅಹಿಂದ ಇದ್ದಾಗ ಪ್ರತ್ಯೇಕ ಸಭೆ ಅವಶ್ಯಕತೆ ಇಲ್ಲ.ಕಾಂಗ್ರೆಸ್ ಪಕ್ಷಕ್ಕೂ ಸಿದ್ದರಾಮಯ್ಯೋತ್ಸವಕ್ಕೂ ಸಂಬಂಧ ಇದೆ. ಇಲ್ಲ ಅಂತಾ ಹೇಳಕ್ಕಾಗಲ್ಲ. ಅದೇ ಕಾರ್ಯಕರ್ತರು ಅಲ್ಲಿ ಇರ್ತಾರೆ. ಆದ್ರೆ ಅದು ಪಕ್ಷದ ಬ್ಯಾನರ್ ಮೇಲೆ ಅಲ್ಲ. ಅಭಿಮಾನಿಗಳ ಬ್ಯಾನರ್ ಮೇಲೆ ಇದೆ. ರಾಹುಲ್ ಗಾಂಧಿಯವರು ಬರ್ತೇನೆ ಅಂತಾ ಹೇಳಿದ್ದಾರೆ. ಆಹ್ವಾನ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಬರಲು ಒಪ್ಪಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯೋತ್ಸವದಲ್ಲಿ ಎಷ್ಟು ಜನ ಸೇರ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ಕುರಿತು ಮೊನ್ನೆ ದಾವಣಗೆರೆಯಲ್ಲಿ ಒಂದು ಸಭೆ ಮಾಡಿದ್ದಾರೆ. ಜುಲೈ 13ಕ್ಕೆ ಬೆಂಗಳೂರಿನಲ್ಲಿ ಸಭೆ ಇದ್ದು ಚರ್ಚೆ ಆಗಬೇಕು. ಯಾರು ಬರ್ತಾರೆ, ಹೇಗೆ ಬರ್ತಾರೆ ಅದರ ಮೇಲೆ ಡಿಪೆಂಡ್ ಆಗುತ್ತದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಓದಿ: ಪಿಎಸ್ಐ ನೇಮಕಾತಿ ಹಗರಣ, ಸಿಐಡಿಗೆ ಮುಕ್ತ ಅವಕಾಶ ನೀಡಿದ್ದರಿಂದ ಅಮೃತ್ ಪೌಲ್ ಬಂಧನ: ಸಿಎಂ ಬೊಮ್ಮಾಯಿ