ಅಥಣಿ: ಇತ್ತೀಚೆಗೆ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘಟನೆ, ಶಾಸಕರ ಆಪ್ತ ಸಹಾಯಕ ಮೂಲಕ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಶ್ರೀಶೈಲ ಜನಗೌಡರ ಮಾತನಾಡಿ, ಕರ್ನಾಟಕ ಸರ್ಕಾರ ಕೃಷಿ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೊಳಿಸಿದ್ದು ಖಂಡನೀಯ. ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸಮಂಜಸ ನಿರ್ಧಾರವಲ್ಲ. ರೈತರಿಗೆ ಮಾರಕವಾಗುವ ಈ ಕಾಯ್ದೆಯಲ್ಲಿ ನ್ಯೂನ್ಯತೆಗಳು ಹೆಚ್ಚಾಗಿ ಇರುವುದರಿಂದ ರೈತ ಸಂಘಟನೆಗಳ ಜೊತೆ ಮುಕ್ತ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ದೇಶಕ್ಕೆ ಸೈನಿಕ ಹೇಗೆ ಅನಿವಾರ್ಯ ಅದೇ ರೀತಿಯಲ್ಲಿ ರೈತರ ಪ್ರಮುಖ ಪಾತ್ರ ವಹಿಸುತ್ತಾರೆ. ಕೃಷಿ ಜಮೀನು ಕೃಷಿಗೆ ಮಾತ್ರ ಉಪಯೋಗಿಸಬೇಕು. ಇದನ್ನು ಬಿಟ್ಟು ಕಾರ್ಪೊರೇಟ್ ವಲಯಕ್ಕೆ ವಿತರಣೆ ಮಾಡುವುದು ಎಷ್ಟರ ಮಟ್ಟಿಗೆ ಸೂಕ್ತ ಎಂದು ಪ್ರಶ್ನಿಸಿದರು.
ಯಾವುದೇ ಸರ್ಕಾರ ಕಾಯ್ದೆಯನ್ನು ತಿದ್ದುಪಡಿ ಮತ್ತು ರಚಿಸುವಾಗ ಪರ ವಿರೋಧ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು ಅತಿ ಮುಖ್ಯ. ಕೊರೊನಾ ಸಂದರ್ಭದಲ್ಲಿ ಏಕಾಏಕಿ ಸರ್ಕಾರ ಈ ನಿರ್ಧಾರಕ್ಕೆ ಕೂಗೊಂಡಿದ್ದಕ್ಕೆ ನಮ್ಮ ಸಂಘಟನೆ ವಿರೋಧ ವ್ಯಕ್ತಪಡಿಸುತ್ತದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಈ ನಿರ್ಧಾರ ಕೈ ಬಿಡಬೇಕು ಇಲ್ಲವಾದರೆ ನ್ಯಾಯಾಲಯದ ಮೂಲಕ ಅವರಿಗೆ ಸರಿಯಾದ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡುವುದರ ಹಿಂದೆ ಕಾರ್ಪೊರೇಟ್ ಹಿತಾಸಕ್ತಿಯನ್ನು ಹೊರತುಪಡಿಸಿದರೆ ಇನ್ಯಾವ ಒತ್ತಾಸೆಗಳು ಕೆಲಸ ಮಾಡುತ್ತಿಲ್ಲ. ಇಲ್ಲದಿದ್ದರೆ ಸರ್ಕಾರ ಇಷ್ಟು ವೇಗದಲ್ಲಿ ಯಾರನ್ನೂ ಸಂಪರ್ಕಿಸಿದೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುಲಿಲ್ಲಿ. ಸರ್ಕಾರದ ಈ ಕ್ರಮವನ್ನು ಭಾರತೀಯ ಕಿಸಾನ್ ಸಂಘ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೇ ಈ ಕೂಡಲೇ ಸರ್ಕಾರವು ರೈತ ವಿರೋಧಿ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.