ಬೆಳಗಾವಿ: ಕೇವಲ 15 ದಿನಗಳ ಅವಧಿಯಲ್ಲಿ ಕುಂದಾನಗರಿಯಲ್ಲಿ ನೈತಿಕ ಪೊಲೀಸಗಿರಿಗೆ ಸಂಬಂಧಿಸಿದ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ಯುವ ಸಮೂಹ ಬೆಚ್ಚಿ ಬಿದ್ದಿದೆ.
ಅಕ್ಟೋಬರ್ 14 ರಂದು ಕಿಡಿಕೇಡಿಗಳು ನಡೆಸಿದ ಕೃತ್ಯ ಈಗ ಬೆಳಕಿಗೆ ಬಂದಿದೆ. ಅನ್ಯ ಕೋಮಿನ ಯುವತಿ ಜೊತೆ ಯುವಕ ಸುತ್ತಾಡುತ್ತಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ರಾಯಬಾಗ ಮೂಲದ ಯುವಕ, ಸಂಕೇಶ್ವರ ಮೂಲದ ಯುವತಿ ಅ.14ರಂದು ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಆಟೋಗಾಗಿ ಈ ಜೋಡಿ ಕಾದು ನಿಂತಿತ್ತು.
ಆಟೋ ಚಾಲಕನ ಬಳಿ ಯಾವುದಾದರೂ ಉದ್ಯಾನಕ್ಕೆ ಕರೆದುಕೊಂಡು ಹೋಗುವಂತೆ ಪ್ರೇಮಿಗಳು ಕೇಳಿದ್ದಾರೆ. ಆದರೆ, ಆತ ಉದ್ಯಾನದ ಬದಲಾಗಿ ಅಮನ್ ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅನ್ಯಕೋಮಿನ ಯುವಕನ ಜೊತೆಗೆ ಓಡಾಡಿದ್ದಕ್ಕೆ ಯುವತಿಯನ್ನು ಥಳಿಸಲಾಗಿದೆ.
ಅವರಿಬ್ಬರ ಬಳಿಯಿದ್ದ 20 ಸಾವಿರ ಮೌಲ್ಯದ ಮೊಬೈಲ್, 50 ಸಾವಿರ ನಗದು ಹಣ ಮತ್ತು ಆಧಾರ್ ಕಾರ್ಡ್, ಎಟಿಎಂ ಕಾರ್ಡ್ ಕಸಿದುಕೊಂಡು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ತಕ್ಷಣವೇ ಹಲ್ಲೆಗೊಳಗಾದ ಯುವತಿ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. 20 ಜನರ ಗುಂಪಿನಿಂದ ರಾಡ್, ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಬೆಳಗಾವಿ ನಗರದ ಅಲಾರವಾಡ್ ಆಟೋ ಚಾಲಕ ದಾವತ್ ಕತೀಬ್, ಅಯುಬ್, ಯುಸೂಫ್ ಪಠಾಣ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಪ್ರಕರಣ ಸಂಬಂಧ ಮಾರ್ಕೆಟ್ ಎಸಿಪಿ, ಮಾಳಮಾರುತಿ ಸಿಪಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಕ್ಟೋಬರ್ 8ರಂದು ಬೆಳಗಾವಿ ತಾಲೂಕಿನ ಯಮನಾಪುರ ಬಳಿ ಚಿಕನ್ ಅಂಗಡಿ ತೆರೆದಿದ್ದಕ್ಕೆ ಗಲಾಟೆಯಾಗಿದೆ.
ಡಿಸಿಪಿ ವಿಕ್ರಂ ಆಮಟೆ ಪ್ರತಿಕ್ರಿಯೆ:
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಸಿಪಿ ವಿಕ್ರಂ ಆಮಟೆ, ಎರಡು ಪ್ರಕರಣಗಳಲ್ಲಿ ದೂರು ಬಂದಿತ್ತು ಕ್ರಮ ಕೈಗೊಂಡಿದ್ದೇವೆ. ಅಕ್ಟೋಬರ್ 14ರಂದು ನಡೆದ ಘಟನೆ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ. ಮೂರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇನ್ನುಳಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಗಂಭೀರವಾಗಿ ಪರಿಗಣಿಸಿದ್ದೇವೆ. ಹಲ್ಲೆಗೊಳಗಾದ ಸಂತ್ರಸ್ತರು ದೂರು ನೀಡಿದಲ್ಲಿ ಖಂಡಿತವಾಗಿ ಕೇಸ್ ದಾಖಲಿಸುತ್ತೇವೆ. ಪೊಲೀಸರ ಬಳಿ ಬಂದು ತಮ್ಮ ಅಳಲು ತೋಡಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ.ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.