ಬೆಳಗಾವಿ : ನರೇಂದ್ರ ಮೋದಿ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಮಾತಿನಿಂದ ಮರುಳು ಮಾಡುವುದನ್ನು ಬಿಡಬೇಕು ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಪ್ರತಿಯೊಬ್ಬ ಕಾರ್ಯಕರ್ತರು ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಆದ ಜನಪರ ಕೆಲಸಗಳನ್ನು ಮತದಾರರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಜೊತೆಗೆ ನರೇಂದ್ರ ಮೋದಿಯವರ ಆಡಳಿತದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ದೇಶದಲ್ಲಿ ಆಗಿಲ್ಲ. ಹಾಗಾಗಿ ಅವರನ್ನು ಸೋಲಿಸಿ ದೇಶ ಉಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮೋದಿಯವರಿಗೆ ಶಕ್ತಿ ಕಡಿಮೆಯಾಗಿದೆ :
ಕಳೆದ 2014 ರಲ್ಲಿ ನರೇಂದ್ರ ಮೋದಿಯವರು ಎರಡೂ ಕೈಗಳನ್ನು ಮೇಲಕ್ಕೆತ್ತಿ ಭಾಷಣ ಮಾಡುತ್ತಿದ್ದರು. ಈಗ ಆ ಶಕ್ತಿ ಅವರಲಿಲ್ಲ. ಕೇವಲ ಸುಳ್ಳು ಭರವಸೆ ನೀಡುತ್ತಾ ದೇಶದ ಜನರ ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಜನ ಅದನ್ನು ಅರಿತಿದ್ದಾರೆ ಎಂದು ಕಿಡಿಕಾರಿದರು.