ಬೆಳಗಾವಿ: ಯಾರ ಬಳಿ ಟಿವಿ, ಫ್ರಿಡ್ಜ್ ಹಾಗೂ ಬೈಕ್ ಇರುತ್ತದೆಯೋ ಅಂಥವರ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್ ಕತ್ತಿ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲು ಇನ್ನೂ ಸ್ವಲ್ಪ ಸಮಯಬೇಕು. ಬಿಪಿಎಲ್ ಕಾರ್ಡ್ ಯಾರ ಹತ್ತಿರ ಇರಬೇಕೆಂಬ ಮಾನದಂಡಗಳು ಇವೆ. 5 ಎಕರೆಗಿಂತ ಹೆಚ್ಚು ಜಮೀನಿರಬಾರದು. ಮೋಟಾರ್ ಸೈಕಲ್, ಟಿವಿ ಮತ್ತು ಫ್ರಿಡ್ಜ್ ಇರಬಾರದು ಎಂಬ ಮಾನದಂಡಗಳಿವೆ. ಈ ಎಲ್ಲ ಮಾನದಂಡ ಯಾರಿಗೆ ಅನ್ವಯಿಸುತ್ತೋ ಅವರೆಲ್ಲ ಬಿಪಿಎಲ್ ಕಾರ್ಡ್ ಮರಳಿ ಕೊಡಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರಿ, ಅರೆಸರ್ಕಾರಿ ಅಧಿಕಾರಿಗಳು ಹಾಗೂ 1 ಲಕ್ಷ 25 ಸಾವಿರಕ್ಕಿಂತ ಹೆಚ್ಚು ಆದಾಯ ಇದ್ದವರು ಬಿಪಿಎಲ್ ಕಾರ್ಡ್ ವಾಪಸ್ ನೀಡಬೇಕು. ಅದಕ್ಕೆ ಮಾರ್ಚ್ 31ರ ವರೆಗೆ ಗಡುವು ನೀಡಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಕೋವಿಡ್ ವ್ಯಾಕ್ಸಿನ್ ಎರಡನೇ ಡೋಸ್ ಹಂಚಿಕೆ ಆರಂಭ
ಜೋಳ, ರಾಗಿ ವಿತರಣೆ: ಏಪ್ರಿಲ್ 1 ರಿಂದ 15 ಜಿಲ್ಲೆಗಳಿಗೆ ಜೋಳ, 15 ಜಿಲ್ಲೆಗಳಿಗೆ ರಾಗಿ ವಿತರಣೆಗೆ ಅನುಮತಿ ಸಿಕ್ಕಿದೆ. ಈಗಾಗಲೇ 15 ಜಿಲ್ಲೆಗಳಿಗೆ 3 ಕೆಜಿ ಜೋಳ, ಎರಡು ಕೆಜಿ ಅಕ್ಕಿ ಹಾಗೂ ಉಳಿದ 15 ಜಿಲ್ಲೆಗಳಿಗೆ 3 ಕೆಜಿ ರಾಗಿ, ಎರಡು ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ. ರಾಜ್ಯದಲ್ಲಿ ಬೆಳೆಯುವ ಜೋಳ, ಭತ್ತ, ರಾಗಿ ಖರೀದಿ ಮಾಡುವ ಕೆಲಸ ಸರ್ಕಾರದ್ದಾಗಿದ್ದು ಏಪ್ರಿಲ್ 1 ರಿಂದ ಆರಂಭಿಸುತ್ತೇವೆ ಎಂದು ತಿಳಿಸಿದರು.