ಬೆಳಗಾವಿ: "ರಾಜಕೀಯ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ಘೋಷಣೆ ಮಾಡಿ, ಕೇವಲ ಮೂರು ತಿಂಗಳಲ್ಲಿ ಕೊಟ್ಟ ಭರವಸೆ ಜಾರಿಗೆ ತಂದಿದ್ದು ಇದೇ ಮೊದಲು. ಇದೊಂದು ಮೈಲಿಗಲ್ಲು. ನಾವು ನುಡಿದಂತೆ ನಡೆದಿದ್ದೇವೆ" ಎಂದು ಲೋಕೋಪಯೋಗಿ ಇಲಾಖೆ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ (Skakti Scheme - Free Bus travel for women) ಚಾಲನೆ ನೀಡಿ ಮಾತನಾಡಿದ ಅವರು, "ಈ ಯೋಜನೆಯಿಂದ ಮಹಿಳಾ ಸಮುದಾಯಕ್ಕೆ ಆರ್ಥಿಕವಾಗಿ ಲಾಭವಾಗಲಿದೆ. ಪ್ರತಿದಿನ ಕೆಲಸಕ್ಕೆ ಹೋಗುವ ಮಹಿಖೆಯರು, ಸಣ್ಣಪುಟ್ಟ ಕೆಲಸಗಳಿಗೆ ದೈನಂದಿನ ಪ್ರಯಾಣ ಮಾಡುವರಿಗೆ ಇದರಿಂದ ಪ್ರಯೋಜನ ಆಗಲಿದೆ" ಎಂದರು.
"ಮೊದಲ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಇನ್ನುಳಿದ ಗ್ಯಾರಂಟಿ ಯೋಜನೆಗಳು ಕೂಡ ಜಾರಿಗೆ ತರಲಾಗುತ್ತಿದೆ. ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಮೂಲಕ ಪಕ್ಷ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತಿದೆ. ಮಹಿಳೆಯರು ಶಕ್ತಿ ಕಾರ್ಡುಗಳನ್ನು ಪಡೆದುಕೊಂಡು ರಾಜ್ಯದಲ್ಲೆಡೆ ಪ್ರಯಾಣ ಮಾಡಲಿದ್ದಾರೆ. ಸರ್ಕಾರಕ್ಕೆ ಆರ್ಥಿಕ ಹೊರೆಯಾದರೂ ನಷ್ಟದಲ್ಲಿರುವ ಸಾರಿಗೆ ಸಂಸ್ಥೆ ಕೂಡ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಸದೃಢವಾಗಲಿದೆ" ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
![Free Bus travel for women](https://etvbharatimages.akamaized.net/etvbharat/prod-images/bgm-shaktiyojanainauguration-news_11062023133725_1106f_1686470845_541.jpg)
ಇದನ್ನೂ ಓದಿ: Free Bus: ಉಚಿತ ಬಸ್ ಪ್ರಯಾಣ- ಮಹಿಳಾ ಪ್ರಯಾಣಿಕರು ಏನಂತಾರೆ?
"ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ "ಶಕ್ತಿ" ಯೋಜನೆಯ ಸದ್ಭಳಕೆ ಮಾಡಿಕೊಂಡು ಮಹಿಳೆಯರು ಸಬಲರಾಗಬೇಕು. ಈ ಯೋಜನೆಯಡಿ ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ್ಯ ವೃದ್ಧಿಯಂತಹ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಮಹಿಳೆಯರು ಎಲ್ಲ ರೀತಿಯಿಂದಲೂ ಸಬಲರಾಗಬೇಕು. ಗ್ಯಾರಂಟಿ ಅನುಷ್ಠಾನದಿಂದ ಸರ್ಕಾರಕ್ಕೆ ವಾರ್ಷಿಕ 60 ಸಾವಿರ ಕೋಟಿ ಹೊರೆಯಾದರೂ ಪ್ರವಾಸೋದ್ಯಮ ಪ್ರಗತಿಯಾಗುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಆಗಲಿದೆ. ಗ್ಯಾರಂಟಿ ಮಾತ್ರವಲ್ಲದೇ ಸರ್ಕಾರ ನೀಡಿರುವ ಉಳಿದ ಭರವಸೆಗಳನ್ನು ಕೂಡ ಹಂತ ಹಂತವಾಗಿ ಈಡೇರಿಸಲಿದೆ" ಎಂದು ಸಚಿವ ಜಾರಕಿಹೊಳಿ ಭರವಸೆ ನೀಡಿದರು.
![Free Bus travel for women](https://etvbharatimages.akamaized.net/etvbharat/prod-images/bgm-shaktiyojanainauguration-news_11062023133725_1106f_1686470845_832.jpg)
"ಚುನಾವಣೆ ಸಂದರ್ಭದಲ್ಲಿ ಪಕ್ಷ ನೀಡಿರುವ ಗ್ಯಾರಂಟಿ ಗಳನ್ನು ಜಾರಿಗೆ ತರಲಾಗುತ್ತಿದೆ. "ಶಕ್ತಿ" ಯೋಜನೆ ಅನುಷ್ಠಾನದ ಮೂಲಕ ಗ್ಯಾರಂಟಿ ಈಡೇರಿಕೆಗೆ ಚಾಲನೆ ದೊರೆತಿದೆ ಎಂದು ಸಮಾರಂಭದ ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದರು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಕಳೆದ ಸರ್ಕಾರದ ಅವಧಿಯಲ್ಲಿ 265 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿರುತ್ತದೆ" ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಆಸಿಫ್(ರಾಜು) ಸೇಠ್ ಅವರು, "ಶಕ್ತಿ ಯೋಜನೆಯ ಜಾರಿಯಿಂದ ಸರ್ಕಾರಕ್ಕೆ ನಷ್ಟವಾಗಲಿದೆ ಎಂದು ಬಹುತೇಕ ಜನರು ವಾದ ಮಂಡಿಸಿದರು. ಆದರೆ ನಷ್ಟವಾದರೂ ಪರವಾಗಿಲ್ಲ, ಮಹಿಳೆಯರು ಸಬಲರಾಗಬೇಕು ಎಂಬ ಉದ್ದೇಶವನ್ನು ಸರ್ಕಾರ ಹೊಂದಿದೆ" ಎಂದು ಹೇಳಿದ್ರು.
![Free Bus travel for women](https://etvbharatimages.akamaized.net/etvbharat/prod-images/bgm-shaktiyojanainauguration-news_11062023133725_1106f_1686470845_119.jpg)
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತರಾದ ಎಂ. ಬಿ. ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ, ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೇಣುಗೋಪಾಲ್ ಆರ್. ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯರಿಂದ ತುಂಬಿದ ನಗರ ಸಾರಿಗೆ ಸಂಸ್ಥೆಯ ಬಸ್ಗಳು ಸಾಂಕೇತಿಕವಾಗಿ ಬೆಳಗಾವಿಯಿಂದ ವಡಗಾವಿಯವರೆಗೆ ಪ್ರಯಾಣ ಬೆಳೆಸಿದವು. ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕ ಆಸೀಫ್ ಸೇಠ್ ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಕೂಡ ಬಸ್ನಲ್ಲಿ ಪ್ರಯಾಣ ಮಾಡಿದರು. ಈ ಕಾರ್ಯಕ್ರಮದ ಬಳಿಕ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಅಲಂಕೃತ ಬಸ್ ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಮಹಿಳೆಯರ ಉಚಿತ ಬಸ್ ಪ್ರಯಾಣದ "ಶಕ್ತಿ" ಯೋಜನೆಗೆ ಚಾಲನೆ ನೀಡಿದರು.
ಇದನ್ನೂ ಓದಿ: Free bus: ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಮಧ್ಯಾಹ್ನ 1 ಗಂಟೆಯಿಂದ ಮಹಿಳೆಯರಿಗೆ ಫ್ರೀ ಬಸ್ ಸೇವೆ ಜಾರಿ