ಬೆಳಗಾವಿ : ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆ ವೇಳೆ ಗ್ರಾಮೀಣ ಕ್ಷೇತ್ರವನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇನೆ ಎಂದಿದ್ದ ಸಚಿವ ರಮೇಶ್ ಜಾರಕಿಹೊಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೊಮ್ಮೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಭಾಷಾ ರಾಜಕಾರಣ ನಡೆಯುವುದಿಲ್ಲ. ಇಲ್ಲೇನಿದ್ದರೂ ಅಭಿವೃದ್ಧಿಯ ಅಜೆಂಡಾ. ಕ್ಷೇತ್ರದ ಜನರು ಅತ್ಯಂತ ಚಾಣಾಕ್ಷರಿದ್ದಾರೆ. ಕೆಲಸ ಮಾಡುವವರನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ. ಬೆಳಗಾವಿ ಕೃಷಿ ಉತ್ಪನ್ನ ಸಮಿತಿ ವ್ಯಾಪಾರಸ್ಥರು ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ನ ಹಿರಿಯ ಸದಸ್ಯ ಯುವರಾಜ ಕದಂ ಅವರು ಎಪಿಎಂಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಅನೇಕರು ಇದಕ್ಕೆ ಸಹಕಾರ ನೀಡಿದ್ದಾರೆ. ಯುವರಾಜ ಕದಂ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದರು. ನಾನು ಯಾವುದೇ ಕೆಲಸವನ್ನು ಹಿಡಿದರೆ ಬಿಡುವ ಪ್ರಶ್ನೆಯೇ ಇಲ್ಲ. ನನ್ನ ಅಭಿವೃದ್ಧಿಯ ಕೆಲಸ ನೋಡಿಕೊಂಡು ನನ್ನನ್ನು ಬೆಂಬಲಿಸಿ. ನನ್ನ ಶಾಸಕ ನಿಧಿಯ 10 ಲಕ್ಷ ರೂಪಾಯಿ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುವುದು. ಈಗಿನ ಎಪಿಎಂಸಿ ಸಚಿವರು ಮೊದಲು ಕಾಂಗ್ರೆಸ್ನಲ್ಲಿದ್ದವರೇ, ನನಗೂ ಆತ್ಮೀಯರು ಎಂದರು.
ಎಪಿಎಂಸಿಗೆ ಆಗಬೇಕಾದ ಕೆಲಸಗಳನ್ನು ಅವರನ್ನೇ ಕರೆತಂದು ಮಾಡಿಸೋಣ. ಎಲ್ಲ ರೀತಿಯಿಂದಲೂ ಎಪಿಎಂಸಿ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದರು.