ಬೆಳಗಾವಿ: ಉಪಚುನಾವಣೆಗೆ ತಡೆ ನೀಡಿದ ಸುಪ್ರೀಂಕೋರ್ಟ್ ಆದೇಶ ಸ್ವಾಗತಾರ್ಹ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು.
ಗೋಕಾಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಪರ ವಕೀಲರ ವಾದ ನೋಡಿ ಚುನಾವಣೆಗೆ ತಡೆ ಬರುತ್ತೆ ಅನಿಸಿತ್ತು. ಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸ ನಮಗಿತ್ತು. ಹೀಗಾಗಿ ರಿಲ್ಯಾಕ್ಸ್ ಆಗಿದ್ದೇವು. ದೇಶದಲ್ಲಿ ನ್ಯಾಯಾಲಯ ಇದ್ದಿದ್ದಕ್ಕೆ ನಾವು ಬದುಕಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ 15 ಜನ ಶಾಸಕರು ಸೇರಿಯೇ ತೀರ್ಮಾನ ತೆಗೆದುಕೊಂಡು ರಾಜೀನಾಮೆ ನೀಡಿದ್ದೇವು. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಹಿರಿಯ ಮಂತ್ರಿಗಳ ನಡುವಳಿಕೆಯಿಂದ ನಾವೆಲ್ಲರೂ ನೊಂದಿದ್ದೆವು. ನಾವು ಪಕ್ಷದ ವಿರೋಧಿಗಳಾಗಿರಲಿಲ್ಲ, ಪಕ್ಷ ಬಿಡುತ್ತೇವೆ ಎಂದೂ ಹೇಳಿರಲಿಲ್ಲ. ಅಸಮಾಧಾನ ಸರಿಪಡಿಸುವಂತೆ ಮನವಿ ಮಾಡಿದ್ದೆವು. ಆದರೆ ಯಾವ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಎಂದರು.
ನಮಗೆ ವಿಪ್ ಜಾರಿ ಆದ ಕೂಡಲೇ ಅಧಿವೇಶನಕ್ಕೆ ಹಾಜರಾಗಿದ್ದೇವು:
ನಾನು ಫೆಬ್ರವರಿಯಲ್ಲಿ ರಾಜೀನಾಮೆ ಕೊಟ್ಟರೂ ಅನರ್ಹ ಮಾಡಲಿಲ್ಲ. ಮೂರು ತಿಂಗಳು ಯಾಕೆ ತಡೆ ಹಿಡಿದರು. ನಮ್ಮನ್ನು ಹೆದರಿಸಿಡುವ ಪ್ರಯತ್ನ ಮಾಡಿದರು. ಈ ಸರ್ಕಾರವನ್ನು ಬೇಗ ತೆಗೆಯಿರಿ ಎಂದು ರಮೇಶ್ ಕುಮಾರ್ ಹೇಳಿದ್ದರು. ಅಲ್ಲದೇ ರಾಜೀನಾಮೆ ಕೊಟ್ಟ ನಾರಾಯಣ ಗೌಡರಿಗೂ ಒಳ್ಳೆಯದೇ ಮಾಡಿದ್ದಿರಿ ಎಂದು ಹಿಂದಿನ ಸ್ಪೀಕರ್ ಬೆನ್ನುತಟ್ಟಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.
ಬೆಳಗಾವಿಯಲ್ಲಿ ಏರ್ಪಡಿಸಿದ್ದ ಬಿಜೆಪಿ ಡಿನ್ನರ್ ಪಾರ್ಟಿಗೆ ನನ್ನ ಜತೆಗೆ ರಾಜಶೇಖರ ಪಾಟೀಲ, ಜಯಮಾಲಾ ಕೂಡ ಬಂದಿದ್ದರು. ಆದ್ರೆ ಮಾಧ್ಯಮಗಳು ನನ್ನನ್ನು ಮಾತ್ರ ಹೈಲೆಟ್ ಮಾಡಿದ್ದವು. ರಾಜೀನಾಮೆ ನೀಡಲು ಸ್ಪೀಕರ್ ಕಚೇರಿಗೆ ಹೋದಾಗ ಪ್ರಭಾವಿ ಸಚಿವರೊಬ್ಬರು ನಮ್ಮ ರಾಜೀನಾಮೆ ಪತ್ರ ಹರಿದು ಬಿಸಾಕಿದ್ದರು. ಆ ವಿಡಿಯೋ ನನ್ನ ಬಳಿ ಇದೆ. ಸಮಯ ಬಂದಾಗ ಬಹಿರಂಗ ಪಡಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದರು.
ರಾಜೀನಾಮೆ ಕೊಡುವುದು ನಮ್ಮ ಹಕ್ಕು:
ವಿಶೇಷ ವಿಮಾನದಲ್ಲಿ ಹೋಗುವುದು, ಬಿಡುವುದು ನಮ್ಮ ಇಷ್ಟ. ನಾವು ಸ್ಪೆಷಲ್ ವಿಮಾನದಲ್ಲಿ ಅಮೇರಿಕಾಕ್ಕೆ ಬೇಕಾದರೂ ಹೋಗುತ್ತೇವೆ ಅದು ನಮ್ಮ ಹಕ್ಕು ಎಂದರು.