ಗೋಕಾಕ್: ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ 5 ಬಾರಿ ರಮೇಶ್ ಜಾರಕಿಹೊಳಿ ಪರ ದುಡಿದಿದ್ದೇನೆ. ಆದರೆ, ಈಗ ಅವರು ಬಿಜೆಪಿ ಹೋಗಿದಾರೆ. ನಾನು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.
ಅನರ್ಹರ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೆ ಸುದ್ದಿಗಾರರೊಂದಿಗೆ ಮಾತನಾಡಿದ ಗೋಕಾಕ್ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ, ನಾನು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡುವುದು ಖಚಿತ. ಕ್ಷೇತ್ರದಲ್ಲಿ ಯಾವುದೇ ಮ್ಯಾಚ್ ಫಿಕ್ಸಿಂಗ್ ಇಲ್ಲ. ನಾವು ಸಹೋದರ ಎಂದು ಪರಿಗಣಿಸಲ್ಲ. ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧೆ ಮಾಡಲು ತಯಾರಾಗಿದ್ದಾನೆ ಎಂದಿದ್ದಾರೆ.
ಗೋಕಾಕ್ ಕ್ಷೇತ್ರದ ಗಣಿತ ಯಾರಿಗೂ ಗೊತ್ತಾಗಲ್ಲ. ಜಾರಕಿಹೊಳಿ ಸಹೋದರರಿಗೆ ಮಾತ್ರ ಈ ಲೆಕ್ಕಾಚಾರ ಗೊತ್ತಾಗುತ್ತದೆ. ಸಹೋದರರ ನಡುವೆ ಯಾವುದೇ ಮ್ಯಾಚ್ ಫಿಕ್ಸಿಂಗ್ ಇಲ್ಲ. ರಮೇಶ ಜಾರಕಿಹೊಳಿ ಚುನಾವಣೆ ತಂತ್ರಗಾರಿಕೆ ಗೊತ್ತಿದೆ. ಹೊಸದಾಗಿ ಬಂದು ಟಿಕೆಟ್ ಕೇಳುವವರಿಗೆ ತಂತ್ರ ಗೊತ್ತಾಗಲು 2 ವರ್ಷ ಬೇಕು ಎಂದರು. ಈಗಾಗಲೇ ಸುಮಾರು 4 ತಿಂಗಳಿಂದ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು, ಎರಡು ಸುತ್ತು ಪ್ರಚಾರ ಕಾರ್ಯ ನಡೆಸಿದ್ದೇವೆ ಎಂದರು.
ಸತೀಶ್ ಜಾರಕಿಹೊಳಿ ಜತೆಗೆ ಚರ್ಚಿಸಿ ಶುಕ್ರವಾರ ಅಥವಾ ಶನಿವಾರದಂದು ನಾಮಪತ್ರ ಸಲ್ಲಿಸಲು ತೀರ್ಮಾನ ಮಾಡಲಾಗುತ್ತದೆ. ಶಿಷ್ಯ ಎಂದು ಹೇಳಿ ಸಿದ್ದರಾಮಯ್ಯ ಹೆಸರನ್ನು ರಮೇಶ ಜಾರಕಿಹೊಳಿ ಹಾಳು ಮಾಡಿದ್ದಾರೆ. ಗೋಕಾಕ್ ಕ್ಷೇತ್ರ ಗೆದ್ದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಉಡುಗೊರೆ ಕೊಡಲಾಗುವುದು ಎಂದು ಲಖನ್ ಜಾರಕಿಹೊಳಿ ಹೇಳಿದ್ದಾರೆ.