ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೆಂದು ಹೇಳಿ ಸರ್ಕಾರಿ ನೌಕರರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರು ವಂಚಕರನ್ನು ಬೈಲಹೊಂಗಲ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದ ವಿಶಾಲ್ ಪಾಟೀಲ, ಬೆಂಗಳೂರಿನ ಕೊಡಗೆಹಳ್ಳಿ ಸಹಕಾರ ನಗರದ ನಿವಾಸಿ ಶ್ರೀನಿವಾಸ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಫೋನ್ ಮತ್ತು ಕಾರನ್ನು ಜಪ್ತಿ ಮಾಡಲಾಗಿದೆ.
ಬೈಲಹೊಂಗಲದ ಕೃಷಿ ಇಲಾಖೆ ಅಧಿಕಾರಿ ಬಿ.ಆರ್.ಹುಲಗನ್ನವರ ಎಂಬುವರಿಗೆ ಈ ವಂಚಕರು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ತಾಲೂಕಿನ ನೇಸರಗಿ ಬಳಿ ಬರುವಂತೆ ವಂಚಕರು ಅಧಿಕಾರಿಗೆ ತಿಳಿಸಿದ್ದರು. ಪೊಲೀಸರಿಗೆ ಮಾಹಿತಿ ನೀಡಿದ್ದ ಕೃಷಿ ಅಧಿಕಾರಿ, ನೇಸರಗಿ ಕ್ರಾಸ್ ಬಳಿ ಹೋಗಿದ್ದರು. ಅಲ್ಲಿಗೆ ಬಂದ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಬೆಳಗಾವಿ, ಧಾರವಾಡ, ಬೈಲಹೊಂಗಲ ಮುಂತಾದ ಕಡೆಗಳಲ್ಲಿ ಇಂತಹ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.