ಚಿಕ್ಕೋಡಿ: ಬೇರೆ ಬೇರೆ ರಾಜ್ಯಗಳಿಗೆ ಕೂಲಿ ಕೆಲಸ ಹಾಗೂ ಇನ್ನಿತರ ಕೆಲಸಕ್ಕೆ ಹೋಗಿದ್ದ ಸಾವಿರಾರು ಕುಟುಂಬಗಳು ಈ ಕೊರೊನಾ ಮಹಾಮಾರಿ ರೋಗ ಒಕ್ಕರಿಸಿದ ಪರಿಣಾಮ ತಮ್ಮ ಮೂಲ ನಿವಾಸಕ್ಕೆ ಬಂದಿದ್ದಾರೆ. ಅವರಿಗೆ ಕೆಲಸವಿಲ್ಲದ ಸಂದರ್ಭದಲ್ಲಿ ಸರ್ಕಾರ ಅಂತಹ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆ ಮೂಲಕ ಕೆಲಸ ನೀಡಿದ್ದರ ಪರಿಣಾಮ ಇಂದು ಬರದ ಗ್ರಾಮಗಳು ಹಸಿರು ಮಯವಾಗಿವೆ.
ಕಳೆದ ನಾಲ್ಕೈದು ತಿಂಗಳ ಹಿಂದೆ ಖಾತರಿ ಯೋಜನೆ ಮೂಲಕ ಕೆಲಸ ಪ್ರಾರಂಭಿಸಿದ್ದು, ಹೂಳೆತ್ತದೇ ಉಳಿದ ಹಲವಾರು ಕೆರೆಗಳನ್ನು ಈ ವರ್ಷ ಹೂಳೆತ್ತಿದ ಪರಿಣಾಮ ಚಿಕ್ಕೋಡಿ ಉಪವಿಭಾಗದ ಕೆರೆಗಳು ಇಂದು ತುಂಬಿವೆ. ಚಿಕ್ಕೋಡಿ ವಿಭಾಗದ ಒಂದೆಡೆ ಕೃಷ್ಣಾ ತೀರದಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾದರೆ, ಇನ್ನೊಂದೆಡೆ ರಾಯಬಾಗ ಹಾಗೂ ಚಿಕ್ಕೋಡಿ ತಾಲೂಕಿನ ದಕ್ಷಿಣ ಭಾಗದ ಗ್ರಾಮಗಳಲ್ಲಿ ಸದಾ ನೀರಿನ ಸಮಸ್ಯೆ ಕಾಡುತ್ತಿದೆ. ಬೇಸಿಗೆ ಹಾಗೂ ಬೇಸಿಗೆ ಪೂರ್ವದಲ್ಲೂ ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ100ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಇಲ್ಲಿಯದಾಗಿದೆ. ಆದ್ರೆ ಈ ಬಾರಿಯ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈ ಭಾಗದ 25 ಕ್ಕೂ ಹೆಚ್ಚು ಕೆರೆಗಳು ತುಂಬಿದ್ದರ ಪರಿಣಾಮ ಈ ಭಾಗದ ಜಮೀನುಗಳು ಹಸಿರುಮಯವಾಗಿವೆ.
ಕೊರೊನಾ ಸಂದರ್ಭದಲ್ಲಿ ಜನರು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆಲಸ ಪಡೆದುಕೊಂಡು ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಕೆರೆ, ಹಳ್ಳ, ಬಾಂದಾರ ಹಾಗೂ ಕಾಲುವೆ ಸೇರಿ ಒಟ್ಟು 100 ಕ್ಕೂ ಹೆಚ್ವು ಹೂಳು ತೆಗೆಯುವ ಕಾಮಗಾರಿಯನ್ನು ಮಾಡಿದ್ದಾರೆ. ಅದರ ಪರಿಣಾಮವಾಗಿ ಇಂದು ಬರಗಾಲದಿಂದ ಕೂಡಿದ ಹಳ್ಳಿಗಳು ಹಚ್ಚ ಹಸಿರಿನಿಂದ ಕಂಗೊಳಿಸುವಂತಾಗಿವೆ.
ಕಳೆದ ಹದಿನೈದು ದಿನಗಳ ಹಿಂದೆ ಸತತವಾಗಿ ಸುರಿದ ಮಳೆಯ ಪರಿಣಾಮ ಬಹುತೇಕ ಎಲ್ಲಾ ಕೆರೆ, ಕಟ್ಟೆ, ಹಾಗೂ ಕಾಲುವೆಗಳು ಸಂಪೂರ್ಣ ತುಂಬಿ ಇಡೀ ಪರಿಸರವೇ ಹಸಿರು ಮಯವಾಗಿದೆ. ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಇಲ್ಲದೆ ಬಣಗುಡುತ್ತಿದ್ದ ಕೆರೆಗಳು ಜಾನುವಾರಗಳು ನೀರಿಗಾಗಿ ಪರಿತಪಿಸಬೇಕಾಗಿತ್ತು. ಆದರೆ, ಈಗ ಕೆರೆ ಪುನಶ್ಚೇತನಗೊಂಡು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದ್ದು, ಬರಪೀಡಿತ ಗ್ರಾಮದ ಜನರಲ್ಲಿ ಈಗ ಮಂದಹಾಸ ಮೂಡಿದೆ.