ಅಥಣಿ: ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇನ್ನು ರಾಜ್ಯಸಭಾ ಸದಸ್ಯತ್ವ ಸ್ಥಾನದ ವಿಚಾರವಾಗಿ ಶನಿವಾರ ನಗರದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಲಕ್ಷ್ಮಣ ಸವದಿ, ನಮ್ಮ ಹಾಗೂ ಉತ್ತರ ಕರ್ನಾಟಕ ಭಾಗದ ಶಾಸಕರ ಬೆಂಬಲ ಡಾ. ಪ್ರಭಾಕರ ಕೋರೆ ಅವರಿಗೆ ಎಂದು ಹೇಳಿ ಕತ್ತಿ ಬ್ರದರ್ಸ್ಗೆ ಶಾಕ್ ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡುತ್ತ, ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಹಲವಾರು ಆಕ್ಷಾಂಕ್ಷಿಗಳು ಇರುವುದು ಸಹಜ. ಪ್ರಭಾಕರ ಕೋರೆ ಅವರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ನನಗೆ ಇನ್ನೊಂದು ಸಾರಿ ಅವಕಾಶ ಕಲ್ಪಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ ಎಂದರು.
ಇನ್ನು ರಾಜ್ಯದಲ್ಲಿ ಅವರು ಹಿರಿಯರು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷ ಎರಡು ಸಲ ಅವಕಾಶ ಕಲ್ಪಿಸಿದೆ, ಇನ್ನೂಂದು ಸಾರಿ ಬೆಂಬಲಿಸಿ ಎಂದು ಅಪೇಕ್ಷೆ ಪಟ್ಟಿದ್ದಾರೆ. ಅದರಂತೆ ನಾವು ಮುಖ್ಯಮಂತ್ರಿ ಜೊತೆ ಮಾತನಾಡುತ್ತೇವೆ. ಆದರೆ, ಕೊನೆಯ ನಿರ್ಣಯ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಡಿಸಿಎಂ ಲಕ್ಷ್ಮಣ ಸವದಿ ಮೇಲು ನೋಟಕ್ಕೆ ಡಾ. ಪ್ರಭಾಕರ ಕೋರೆ ಮೇಲೆ ಒಲವು ತೋರಿದ್ದಾರೆ.