ಬೆಳಗಾವಿ: ಕಳೆದ ವರ್ಷ ಸುರಿದ ಮಳೆ ಮತ್ತು ಪ್ರವಾಹ ಪರಿಸ್ಥಿತಿಗೆ ನೇಕಾರ ಸಮುದಾಯದ ಕುಟುಂಬಗಳು ನಲುಗಿ ಹೋಗಿದ್ದವು. ಇದೀಗ ಕೊರೊನಾ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಜಿಲ್ಲೆಯ ರಾಮದುರ್ಗಾ ತಾಲೂಕಿನಲ್ಲಿ ನೇಕಾರ ಸಮುದಾಯದ ಕುಟುಂಬಗಳು ನೇಕಾರಿಕೆಯನ್ನು ನಂಬಿ ಜೀವನ ನಡೆಸುತ್ತಿವೆ. ನೇಕಾರಿಕೆಯಿಂದ ಸಿಗುವ ಪುಡಿಗಾಸು ಕೂಡಿಸಿ ಬದುಕು ಕಟ್ಟಿಕೊಳ್ಳಲು ಮುಂದಾದ ಇವರಿಗೆ ಕೋವಿಡ್ ಬರೆ ಎಳೆದಿದ್ದು, ಉದ್ಯೋಗವಿಲ್ಲದೆ ಒಪ್ಪೊತ್ತಿನ ಊಟಕ್ಕೆ ಪರಿತಪಿಸುತ್ತಿದ್ದಾರೆ.
ಕಳೆದ ವರ್ಷ ಸುರಿದ ಮಳೆ, ಪ್ರವಾಹದಿಂದ ನೇಕಾರರ ಕೈಮಗ್ಗಗಳು ನೀರುಪಾಲಾಗಿದ್ದವು. ಇವರ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ ಮನೆ ಕಳೆದುಕೊಂಡವರಿಗೆ ಎಬಿಸಿ ಗ್ರೇಡ್ ಮೂಲಕ ಪರಿಹಾರ ಘೋಷಣೆ ಮಾಡಿತ್ತು. ಆದರೆ ಪರಿಹಾರ ಘೋಷಣೆಯಾಗಿ ಒಂದು ವರ್ಷ ಕಳೆದರೂ ಹಣ ಮಾತ್ರ ಈ ಕುಟುಂಬಗಳ ಕೈ ಸೇರಿಲ್ಲ.
ನೆರೆ ಪರಿಹಾರವನ್ನು ಪಡೆಯಲು ಜಿಲ್ಲಾಧಿಕಾರಿ ಕಚೇರಿ, ಪುರಸಭೆ ಕಾರ್ಯಾಲಯ, ತಹಶೀಲ್ದಾರರ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗಿಲ್ಲ. ಡಿಸಿ ಕಚೇರಿಯಲ್ಲಿ ವಿಚಾರಿಸಿದರೆ ಪುರಸಭೆಯತ್ತ ಬೊಟ್ಟು ಮಾಡ್ತಾರೆ, ಪುರಸಭೆಯಲ್ಲಿ ಕೇಳಿದರೆ ಪರಿಹಾರದ ಪಟ್ಟಿ ಕೈಗಿಟ್ಟು ನಿಮ್ಮ ಹಣ ಜಮೆಯಾಗಿದೆ ಬ್ಯಾಂಕ್ನಲ್ಲಿ ವಿಚಾರಿಸಿ ಎನ್ನುತ್ತಿದ್ದಾರಂತೆ. ಹೀಗೆ ಬ್ಯಾಂಕ್, ಕಚೇರಿಗಳನ್ನು ಅಲೆದು ಚಪ್ಪಲಿ ಸವಿದಿವೆ ಹೊರತು ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ನೇಕಾರರ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಕೊರೊನಾ ಲಾಕ್ಡೌನ್ನಿಂದಾಗಿ ನಮಗೆ ಕೆಲಸ ಇಲ್ಲದಂತಾಗಿದೆ. ಕೈಯಲ್ಲಿ ಹಣವಿಲ್ಲದೆ ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ. ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ತಂದೆ, ವಯಸ್ಸಾದ ತಾಯಿ, ಚಿಕ್ಕ ಚಿಕ್ಕ ಮಕ್ಕಳಿದ್ದಾರೆ. ಇವರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕೆಂದು ನೇಕಾರಿಕಾ ಮಹಿಳೆಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.