ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ವಾಯವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಗೆಲುವು ಸಾಧಿಸಿದ್ದಾರೆ. ತಮ್ಮ ನೆಚ್ಚಿನ ನಾಯಕನ ಗೆಲುವು ಖಚಿತ ಆಗುತ್ತಿದ್ದಂತೆ ಬೆಳಗಾವಿಯ ಜ್ಯೋತಿ ಕಾಲೇಜಿನ ಹೊರಗಡೆ ಅವರು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರಕಾಶ್ ಹುಕ್ಕೇರಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಒಟ್ಟು 5045 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 21402 ಮತ ಚಲಾವಣೆಗೊಂಡಿದ್ದವು. ಪ್ರಕಾಶ ಹುಕ್ಕೇರಿ 11460 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಅರುಣ ಶಹಾಪುರ 6405 ಮತ ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿ 544 ಹಾಗೂ ಪಕ್ಷೇತರ ಅಭ್ಯರ್ಥಿ ಎನ್.ಬಿ ಬನ್ನೂರ 1009 ಮತಗಳನ್ನು ಪಡೆದಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 1270 ಮತಗಳು ತಿರಸ್ಕೃತಗೊಂಡಿವೆ. ಇನ್ನು ಸೋಲು ಒಪ್ಪಿಗೊಂಡ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ, ಹಣದ ಹೊಳೆಯ ನಡುವೆ ನನಗೆ ಮತ ನೀಡಿದ ಶಿಕ್ಷಕರಿಗೆ ಧನ್ಯವಾದ ಎಂದಿದ್ದಾರೆ.