ಚಿಕ್ಕೋಡಿ (ಬೆಳಗಾವಿ): ಒಂದು ಕಡೆ ದೇಶದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಯಾವಾಗಲೂ ಹಾವು- ಮುಂಗುಸಿಯಂತೆ ಇದ್ದರೆ, ಈ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮದ ಸರ್ವಾಂಗೀಣ ವಿಕಾಸಕ್ಕಾಗಿ ಬಿಜೆಪಿ- ಕಾಂಗ್ರೆಸ್ ಸದಸ್ಯರು ಸೇರಿ ಗ್ರಾಮದ ಅಭಿವೃದ್ಧಿಗೆ ಪಕ್ಷಭೇದ ಮರೆತು ಒಂದಾಗಿ ಗ್ರಾಮ ಪಂಚಾಯತಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್- ಬಿಜೆಪಿ ಮೈತ್ರಿ ಮಾಡಿಕೊಂಡಿವೆ. 20 ಸದಸ್ಯರ ಬಲ ಹೊಂದಿರುವ ಯಡೂರ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿಯಿಂದ ಏಳು ಜನ ಸದಸ್ಯರು, ಕಾಂಗ್ರೆಸ್ನಿಂದ ಆರು ಜನ ಸದಸ್ಯರು ಹಾಗೂ ಶಿವತೇಜ ಫೌಂಡೇಶನ್ನಿಂದ 7 ಜನ ಸದಸ್ಯರು ಆಯ್ಕೆಯಾಗಿದ್ದರು.
ಇಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪರ ಅಧ್ಯಕ್ಷ ಸ್ಥಾನಕ್ಕೆ ಶ್ರೀದೇವಿ ವರಾಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ ದೇಸಾಯಿ ನಾಮಪತ್ರವನ್ನು ಸಲ್ಲಿಸಿದ್ದರು. ಇತ್ತ ಶಿವತೇಜ ಫೌಂಡೇಶನ್ನಿಂದ ಅಧ್ಯಕ್ಷ ಸ್ಥಾನಕ್ಕೆ ಬಿಬಾ ಕಾಂಬಳೆ ಅವರು ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೆ ಅಜಯ ಸೂರ್ಯವಂಶಿ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಶ್ರೀದೇವಿ ವರಾಳೆ 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಚುನಾಯಿತರಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ರಾಹುಲ ದೇಸಾಯಿ 13 ಮತಗಳನ್ನು ಪಡೆದು ಆಯ್ಕೆಯಾದರು. ಕಾಂಗ್ರೆಸ್-ಬಿಜೆಪಿ ಸದಸ್ಯರು ಸೇರಿ ಗ್ರಾಮ ಪಂಚಾಯಿತಿಯ ಆಡಳಿತದ ಅಧಿಕಾರ ಚುಕ್ಕಾಣಿ ಹಿಡಿದರು. ಇದರಿಂದ ಸಹಜವಾಗಿಯೇ ಶಿವತೇಜ ಫೌಂಡೇಶನ್ಗೆ ಮುಖಭಂಗವಾಗಿದೆ.