ಮುಂದಿನ ಹೋರಾಟದ ತೀರ್ಮಾನ ನಾಳೆ ಪ್ರಕಟಿಸುತ್ತೇವೆ : ಜಯಮೃತ್ಯುಂಜಯ ಶ್ರೀ - ಶಾಸಕ ಬಸವನಗೌಡ ಪಾಟೀಲ್
2ಎ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪಂಚಮಸಾಲಿ ನಿಯೋಗ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್ ಹಾಜರಿದ್ದರು.


Published : Dec 12, 2023, 9:24 PM IST
|Updated : Dec 12, 2023, 10:11 PM IST
ಬೆಳಗಾವಿ: ನಮ್ಮ ನಿಲುವು ಏನೂ ಅನ್ನೋದನ್ನು ನಾಳೆ ನಗರದ ಚನ್ನಮ್ಮ ಸರ್ಕಲ್ನಲ್ಲಿ ಸಭೆ ಸೇರಲಿದ್ದು, ಅಲ್ಲಿ ನಮ್ಮ ನಿರ್ಧಾರವನ್ನು ಪ್ರಕಟಣೆ ಮಾಡುತ್ತೇವೆ ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸುವರ್ಣಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಮೀಸಲಾತಿ ಸಂಬಂಧ ಸಿಎಂ ಜೊತೆ ಚರ್ಚೆ ನಡೆಸಿದ್ದೇವೆ. ಮೂರು ವರ್ಷಗಳ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನೂತನ ಸರ್ಕಾರ ಬಂದ ಮೇಲೆ ಮೊದಲ ಸುತ್ತಿನ ಮಾತುಕತೆ ನಡೆಸಿ, ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸಬೇಕು ಅಂತ ನಾಳೆ ಬೃಹತ್ ಹೋರಾಟ ಸಭೆಯನ್ನು ಕರೆಯಲಾಗಿದೆ. ಹೋರಾಟಕ್ಕೆ ಮಣಿದು ಸರ್ಕಾರ ಇವತ್ತು ನಮ್ಮೊಂದಿಗೆ ಸಭೆ ನಡೆಸಿದೆ ಎಂದು ಸ್ಪಷ್ಟಪಡಿಸಿದರು.
ನಾಳೆ ಎಲ್ಲ ನಮ್ಮ ಸಮುದಾಯದ ಮುಖಂಡರು ಬರಬೇಕು. ಮುಂದಿನ ಹೋರಾಟ ತೀರ್ಮಾನ ನಾಳೆ ಪ್ರಕಟಿಸುತ್ತೇವೆ. ಇವತ್ತು ಸಂಜೆ ಮತ್ತೊಂದು ಸುತ್ತಿನ ಸಭೆ ಮಾಡಿ ಸಿಎಂ ಹೇಳಿಕೆ, ನಮ್ಮ ಹೋರಾಟದ ತೀರ್ಮಾನ ಕೈಗೊಳ್ಳುವ ಬಗ್ಗೆ ನಾಳೆ ಪ್ರಕಟಣೆ ಮಾಡುತ್ತೇವೆ. ಸಿಎಂ ಜೊತೆಗೆ ನಡೆಸಿದ ಸಭೆ ವಿಷಯ ಬಗ್ಗೆ ಮಾಧ್ಯಮಗಳ ಮುಂದೆ ನಾ ಹೇಳೋಕೆ ಇಷ್ಟ ಪಡೋದಿಲ್ಲ ಎಂದು ಹೇಳಿದರು.
ಎಜಿ ಬಳಿ ಸಭೆ ಮಾಡಿ ನಿರ್ಧಾರ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕಲ್ಪಿಸುವ ವಿಚಾರವಾಗಿ ಸಿಎಂ ನಡೆಸಿದ ಸಭೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ವಿಜಯಾನಂದ ಕಾಶಪ್ಪನವರ್ ಭಾಗಿಯಾಗಿದ್ದರು.
ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು,ಬೆಂಗಳೂರಿಗೆ ತೆರಳಿದ ನಂತರ ಅಡ್ವಕೋಟ್ ಜನರಲ್ ಮತ್ತು ಹಿಂದುಳಿದ ವರ್ಗಗಳ ಆಯೋಗದ ಜೊತೆ ಸಭೆ ಮಾಡಿ ತಿಳಿಸುತ್ತೇನೆ ಎಂದು ಪಂಚಮಸಾಲಿ ಮುಖಂಡರಿಗೆ ಭರವಸೆ ನೀಡಿದರು.
ಪಂಚಮಸಾಲಿ ಮುಖಂಡರಲ್ಲಿ ಭಿನ್ನ ನಿಲುವು: ನಾಳೆ ಹೋರಾಟ ಮಾಡಬೇಕೋ, ಮಾಡಬಾರದೊ ಎನ್ನುವದರ ಬಗ್ಗೆ ಸಮುದಾಯ ಮುಖಂಡರಲ್ಲಿ ಗೊಂದಲ ಉಂಟಾಯಿತು. ಸಿಎಂ ತೆರಳಿದ ನಂತರ ಸಭೆ ಮುಂದುವರಿಸಿದ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮುಖಂಡರು ಭಿನ್ನ ನಿಲುವು ತಳೆದಿದ್ದಾರೆ.
ಸ್ವಾಮೀಜಿ ಎದುರು ನಾಯಕರು ಕಿತ್ತಾಡಿಕೊಂಡಿರುವ ಘಟನೆ ನಡೆಯಿತು. ಧರಣಿ ಮಾಡಬೇಕಾ ಅಥವಾ ಸಿಎಂ ನೀಡುವ ಗಡುವಿನ ವೆರೆಗೆ ಕಾಯಬೇಕಾ ಅನ್ನುವುದರ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಒಬ್ಬೊಬ್ಬರು ಒಂದೊಂದು ವಾದ ಮಂಡಿಸಿದರು. ಈ ವೇಳೆ, ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮತ್ತು ಇತರ ಪದಾಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಈ ವೇಳೆ, ರಾಜಕಾರಣ ಮಾಡೋದು ಬೇಡ ಎಂದು ಕಾಶಪ್ಪನವರ್ ಗದರಿದರು.
ಹೋರಾಟ ಮಾಡಬೇಕೋ ಬೇಡ್ವೋ ಎನ್ನುವುದರ ಬಗ್ಗೆ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ವಿಜಯಾನಂದ ಕಾಶಪ್ಪನವರ್, ಮೂರು ವರ್ಷಗಳಿಂದ ಪಕ್ಷಾತೀತ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮುಂದೆಯೂ ಹಾಗೇ ನಡೆಯುತ್ತೆ ಅದ್ರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಸಣ್ಣಪುಟ್ಟ ವ್ಯವಸ್ಥೆ ಇರುತ್ತೆ ಅದು ಅವರ ಭಾವನೆಗೆ ಅವರು ಹೇಳ್ತಾರೆ. ಹಿಂದೆ ಯಾವ ರೀತಿ ನಡೆದಿದೆ ಆ ರೀತಿ ನಡೆದರೆ ಅವರಿಗೂ ಗೌರವ ನಮಗೂ ಗೌರವ. ಅದನ್ನ ಉಳಿಸಿಕೊಳ್ಳೋದು ಅವರಿಗೆ ಬಿಟ್ಟಿದ್ದು ಎಂದರು.
ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಭರವಸೆ: ಇದೇ ವೇಳೆ ಮಾತನಾಡಿದ ವಿಜಯಾನಂದ್ ಕಾಶಪ್ಪನವರ್, ನಮ್ಮ ಬೇಡಿಕೆ ಈ ಡೇರಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಚೆನ್ನಮ್ಮನ ಸರ್ಕಲ್ ನಲ್ಲಿ ನಾಳೆ ನಮ್ಮ ನಿಲುವು ಪ್ರಕಟಣೆ ಮಾಡುತ್ತೇವೆ ಎಂದರು.
ಇದನ್ನೂಓದಿ:ಸಿವಿಲ್ ನ್ಯಾಯಾಲಯಗಳ ತಿದ್ದುಪಡಿ ವಿಧೇಯಕ ಸೇರಿ ಮೂರು ತಿದ್ದುಪಡಿ ವಿಧೇಯಕಗಳ ಮಂಡನೆ