ಬೆಳಗಾವಿ : ಗೋವಾದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇತ್ತು ಎಂಬ ಡಿಕೆಶಿ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾದ ಪಣಜಿಯಲ್ಲಿ ಪ್ರತಿಕ್ರಿಯಿಸಿದ ಸಿ. ಟಿ ರವಿ ಅವರು, ಡಿಕೆಶಿ ಮಾಡಿರುವ ಆರೋಪ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ. ಸ್ವತಃ ಭ್ರಷ್ಟಾಚಾರ ಆರೋಪದ ಮೇಲೆ ಜೈಲಿಗೆ ಹೋಗಿದ್ದ ಡಿಕೆಶಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಹೀಗಿದ್ದರೂ, ಅವರ ಬಾಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತು ಬರುತ್ತಿವೆ. ಭೂತದ ಬಾಯಲ್ಲಿ ಬರುವ ಭಗವದ್ಗೀತೆಗೂ, ಡಿಕೆಶಿ ಬಾಯಲ್ಲಿ ಬರುವ ಭ್ರಷ್ಟಾಚಾರದ ಮಾತಿಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿ ಇದೆ. ತನ್ನಂತೆಯೇ ಎಲ್ಲರಿದ್ದಾರೆ ಎಂದು ಅವರು ಭಾವಿಸಿಕೊಂಡಿದ್ದಾರೆ.
ಗೋವಾದಲ್ಲಿ ಬಿಜೆಪಿಯ ಮನೋಹರ್ ಪರಿಕ್ಕರ್, ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ಕೊಟ್ಟಿದೆ. ಇದು ಹಳೆ ಗೋವಾ ಅಲ್ಲ, ಹೊಸ ಗೋವಾ. ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಗೋವಾ. ಇಲ್ಲಿ ಫ್ಲೈಓವರ್ ನೋಡಲು ಸಿಕ್ಕಿದೆ.
ಆ. 15ರಂದು ಲೋಕಾರ್ಪಣೆಯಾಗುವ ಹೊಸ ಏರ್ಪೋರ್ಟ್ ಬಿಜೆಪಿ ಸರ್ಕಾರದ ಕೊಡುಗೆ. ಐಐಟಿ, ವೈದ್ಯಕೀಯ ಕಾಲೇಜು ಇವೆಲ್ಲ ಬಿಜೆಪಿ ಸರ್ಕಾರದ ಕೊಡುಗೆ. ಆದರೆ, ಕಾಂಗ್ರೆಸ್ ಅಂದರೆ ಭ್ರಷ್ಟಾಚಾರದ ಕೂಪ. ಕಾಂಗ್ರೆಸ್ ಅಂದ್ರೆ ವಂಶವಾದ ಬೆಳೆಸುವಂತಹ ಜನಸಾಮಾನ್ಯರಿಗೆ ಅವಕಾಶ ನೀಡದ ಪಾರ್ಟಿ.
ನಮ್ಮ ಪಾರ್ಟಿ ಸಾಮಾನ್ಯ ಜನರಲ್ಲಿ ರಾಜಕೀಯ ನಾಯಕತ್ವ ಬೆಳೆಸುತ್ತೆ. ಹೀಗಾಗಿ, ಕಾಂಗ್ರೆಸ್ನಿಂದ ಗೋವಾ ಜನತೆ ಪಾಠ ಹೇಳಿಸಿಕೊಳ್ಳುವಂತಹ ಸ್ಥಿತಿ ಇಲ್ಲ. ಡಿಕೆಶಿ ಅಲ್ಲ, ಇನ್ನೂ ನೂರು ಜನ ಬರಲಿ, ಗೋವಾದಲ್ಲಿ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ. ಬಂದ ದಾರಿಗೆ ಸುಂಕ ಇಲ್ಲ ಅಂತಾ ಅವರು ವಾಪಸ್ ಹೋಗಬೇಕು ಎಂದು ತಿರುಗೇಟು ನೀಡಿದರು.
ಓದಿ: ಡಾ. ನೀರಜ್ ಅವರ ಫಾರ್ಮ್ ಹೌಸ್ನಲ್ಲಿಂದು ಸಂಜೆಯೊಳಗೆ ಸೌಂದರ್ಯ ಅಂತ್ಯಕ್ರಿಯೆ