ಬೆಳಗಾವಿ: ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ. ಈ ಮಧ್ಯೆ ಕೈ-ಕಮಲ ಪಾಳೆಯದಲ್ಲಿ ಸದ್ದಿಲ್ಲದೇ ಚಟುವಟಿಕೆಗಳು ತೀವ್ರಗೊಂಡಿವೆ. ಉಭಯ ಪಕ್ಷಗಳ ಆಕಾಂಕ್ಷಿಗಳು ಟಿಕೆಟ್ಗಾಗಿ ಮತ್ತೆ ನಾಯಕರ ಮೊರೆ ಹೋಗುತ್ತಿದ್ದಾರೆ. ಟಿಕೆಟ್ ಯಾರಿಗೆ ಎಂಬುದನ್ನು ಪಕ್ಷಗಳ ಹೈಕಮಾಂಡ್ ಸಸ್ಪೆನ್ಸ್ ಆಗಿಯೇ ಇಟ್ಟಿದ್ದು, ಆಕಾಂಕ್ಷಿಗಳ ಕುತೂಹಲಕ್ಕೆ ಕಾರಣವಾಗಿದೆ.
ಶ್ರದ್ಧಾಗೆ ಒಲಿಯುತ್ತಾ ಅದೃಷ್ಟ?:
ಕೊರೊನಾಗೆ ಬಲಿಯಾದ ಸುರೇಶ್ ಅಂಗಡಿ ಅವರ ಕಿರಿಯ ಪುತ್ರಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ಅವರ ಸೊಸೆಯೂ ಆಗಿರುವ ಶ್ರದ್ಧಾ ಶೆಟ್ಟರ್ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಸಚಿವರಾದ ಬಳಿಕ ಸುರೇಶ್ ಅಂಗಡಿ ಅವರು ಕ್ರಿಯಾಶೀಲರಾಗಿದ್ದರು. ಅಂಗಡಿ ಕಾರ್ಯವೈಖರಿಗೆ ಹೈಕಮಾಂಡ್ ನಾಯಕರು ಖುಷಿಪಟ್ಟಿದ್ದರು. ಅವರ ಅಕಾಲಿಕ ನಿಧನದ ಬಗ್ಗೆಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನೋವು ವ್ಯಕ್ತಪಡಿಸಿದ್ದರು.
ಅಲ್ಲದೇ ಇತ್ತೀಚೆಗೆ ಬೆಳಗಾವಿ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ, ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ವೇದಿಕೆ ಕಾರ್ಯಕ್ರಮದಲ್ಲೂ ಅಂಗಡಿ ಅವರ ಪಕ್ಷ ನಿಷ್ಠೆ, ಸಚಿವರಾದ ಬಳಿಕ ಅವರ ಕಾರ್ಯವೈಖರಿ ಬಗ್ಗೆಯೂ ಅಮಿತ್ ಶಾ ಸ್ಮರಿಸಿದ್ದರು. ಮತ್ತೊಂದೆಡೆ, ಉಪಚುನಾವಣೆಯಲ್ಲಿ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡುವಂತೆ ಅಭಿಮಾನಿಗಳು ಹಾಗೂ ಜಿಲ್ಲೆಯ ಬಿಜೆಪಿ ನಾಯಕರು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಶ್ರದ್ಧಾ ಅವರು ತಂದೆಯಂತೆ ಜನಸೇವೆ ಮಾಡುವ ಇಚ್ಛೆ ಹೊಂದಿದ್ದಾರೆ. ಅಲ್ಲದೇ ಚುನಾವಣೆ ಪೂರ್ವವೇ ಕ್ಷೇತ್ರದಲ್ಲಿ ಸಂಚರಿಸಿ ಅಭಿಮಾನಿಗಳನ್ನ ಭೇಟಿ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಶ್ರದ್ಧಾ ಅವರಿಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಅನುಕಂಪದ ಅಲೆಗೆ ಬಿಜೆಪಿ ಮೊರೆ:
ಚುನಾವಣೆ ಘೋಷಣೆ ಹೊಸ್ತಿಲಲ್ಲೇ ರಾಸಲೀಲೆ ಸಿಡಿ ಬಿಡುಗಡೆಯಿಂದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜಾರಕಿಹೊಳಿ ಸಿಡಿ ಪ್ರಕರಣದಿಂದ ಕ್ಷೇತ್ರದಲ್ಲಿ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬರುವ ಗೋಕಾಕ ಹಾಗೂ ಅರಬಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಶಾಸಕರಾಗಿದ್ದಾರೆ. ಇದೀಗ ರಮೇಶ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಿಡಿ ಪ್ರಕರಣದ ಕಾನೂನು ಹೋರಾಟದಲ್ಲಿ ತೊಡಗಿದ್ದು, ಉಪ ಚುನಾವಣೆಯಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು.
ಮತ್ತೊಂದೆಡೆ, ಜಿಲ್ಲೆಯಲ್ಲೀಗ ಮೂವರು ಸಚಿವರಿದ್ದರೂ ಅವರ್ಯಾರು ಬೆಳಗಾವಿ ಕ್ಷೇತ್ರದವರಲ್ಲ. ಬೆಳಗಾವಿ ಉಪಚುನಾವಣೆಯನ್ನು ಯಾರ ನೇತೃತ್ವದಲ್ಲಿ ಎದುರಿಸಬೇಕು ಎಂಬುವುದೇ ಇದೀಗ ಬಿಜೆಪಿಗೆ ದೊಡ್ಡ ತಲೆನೋವಾಗಿದೆ. ಮತ್ತೊಂದೆಡೆ 50ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಶ್ರದ್ಧಾ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ಅನುಕಂಪದ ಅಲೆಯಲ್ಲಿ ಬಿಜೆಪಿ ಗೆಲ್ಲಬಹುದು ಎಂಬುವುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.
ಆದರೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹಾಗೂ ಮನೋಹರ್ ಪರಿಕ್ಕರ್ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಈ ಕಾರಣ ಇಟ್ಟುಕೊಂಡು ಅಂಗಡಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡದಿದ್ದರೆ ಬಿಜೆಪಿಗೆ ತುಸು ಸಮಸ್ಯೆ ಆಗಬಹುದು. ಶ್ರದ್ಧಾ ಶೆಟ್ಟರ್ ಹೊರತು ಪಡಿಸಿದರೆ ಡಾ. ಗಿರೀಶ ಸೋನವಾಲ್ಕರ್, ಡಾ. ರವಿ ಪಾಟೀಲ, ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಟಿಕೆಟ್ ರೇಸ್ನಲ್ಲಿದ್ದಾರೆ. ಟಿಕೆಟ್ ಯಾರಿಗೆ ಎಂಬುವುದನ್ನು ಬಿಜೆಪಿ ಹೈಕಮಾಂಡ್ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಆದರೆ ಆಕಾಂಕ್ಷಿಗಳು ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸಿದ್ದಾರೆ.
ಸತೀಶ್ರನ್ನೇ ಕಣಕಿಳಿಸುತ್ತಾ ಕಾಂಗ್ರೆಸ್?
ಮೂರು ಬಾರಿ ಸಚಿವರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ಚಿಂತಿಸುತ್ತಿದ್ದಾರೆ. ಅಖಂಡ ಗೋಕಾಕ್ ತಾಲೂಕಿನಲ್ಲಿ ಸತೀಶ ಜಾರಕಿಹೊಳಿಗೆ ಸಾಕಷ್ಟು ಜನಬೆಂಬಲ ಇದೆ. ಅಲ್ಲದೇ ಬೆಳಗಾವಿ ಹಾಗೂ ಬೈಲಹೊಂಗಲದಲ್ಲಿ ಹಾಲಿ ಶಾಸಕರು ಕಾಂಗ್ರೆಸ್ನವರೇ ಆಗಿದ್ದಾರೆ. ಮತ್ತೊಂದೆಡೆ ಸವದತ್ತಿ ಹಾಗೂ ರಾಮದುರ್ಗದಲ್ಲೂ ಕಾಂಗ್ರೆಸ್ಗೆ ಸಾಂಪ್ರದಾಯಿಕ ಮತಗಳಿವೆ. ಈ ಕಾರಣಕ್ಕೆ ಸತೀಶ್ ಅವರಿಗೆ ಮಣೆ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ.
ಚುನಾವಣೆಗೆ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಕಣಕ್ಕಿಳಿಯಲು ಸಿದ್ಧ ಎಂದು ಸತೀಶ್ ಕೂಡ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಾಗೂ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಕೂಡ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಟಿಕೆಟ್ ಯಾರಿಗೆ ಎಂಬುದನ್ನು ಉಭಯ ಪಕ್ಷಗಳ ಹೈಕಮಾಂಡ್ ನಾಯಕರು ಸಸ್ಪೆನ್ಸ್ ಆಗಿ ಇಟ್ಟಿದ್ದಾರೆ.