ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಸರ್ಕಾರ ನೀಡಬೇಕು. ಹಲವಾರು ಬಾರಿ ಮೀಸಲಾತಿ ಕೊಡುವುದಾಗಿ ಸರ್ಕಾರ ಭರವಸೆ ನೀಡಿ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್ 13ರಂದು ಗೋಕಾಕ್ನಲ್ಲಿ ಲಿಂಗಾಯತ ಪಂಚಮಸಾಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 1ಕ್ಕೆ ಗೋಕಾಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರ್ಯಾಲಿ ನಡೆಯಲಿದೆ. ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ಸಮವೇಶ ನಡೆಯಲಿದೆ ಎಂದರು.
ಶಕ್ತಿ ಕೇಂದ್ರ: ಗೋಕಾಕ್ ಇಡೀ ಕರ್ನಾಟಕದಲ್ಲಿ ರಾಜಕೀಯ ಶಕ್ತಿ ಕೇಂದ್ರವಾಗಿದೆ. ಗೋಕಾಕ್ ತಾಲೂಕಿನಲ್ಲಿ 70 ಸಾವಿರ ಪಂಚಮಸಾಲಿ ಸಮುದಾಯದವರಿದ್ದಾರೆ. ಕುಂದರನಾಡಿನಲ್ಲಿ ಜನ ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗಿಯಾಗುತ್ತಾರೆ. ಸರ್ಕಾರ ಮೇಲಿಂದ ಮೇಲೆ ನಮ್ಮ ನಾಯಕರಿಗೆ ಸಕಾರಾತ್ಮಕ ಸ್ಪಂದನೆ ನೀಡುತ್ತ ಬಂದಿದೆ. ಆದರೆ ಅದು ಕೇವಲ ಭರವಸೆ ಆಗಿಯೇ ಉಳಿದಿದೆ. ಹೀಗಾಗಿ ನವೆಂಬರ್ 13ರಂದು ಗೋಕಾಕ್ ಸಮಾವೇಶದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿದೆ ಎಂದರು.
ರಾಜಕೀಯ ಮುಖಂಡರು ಭಾಗಿ: ಅಂದಿನ ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಲಕ್ಷ್ಮೀ ಹೆಬ್ಬಾಳ್ಕರ್, ಮಹೇಶ್ ಕುಮಟಳ್ಳಿ, ಮಹಾಂತೇಶ ದೊಡ್ಡಗೌಡರ, ಮಾಜಿ ಸಚಿವ ವಿನಯ್ ಕುಲಕರ್ಣಿ, ಎಂ.ಬಿ. ಪಾಟೀಲ್, ಈರಣ್ಣಾ ಕಡಾಡಿ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ನಾಯಕರು ಭಾಗಿಯಾಗುತ್ತಾರೆ. ಡಿ.12ರಂದು ಬೆಂಗಳೂರಲ್ಲಿ ನಡೆಯುವ ಸಮಾವೇಶಕ್ಕೆ 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಎರಡು ವರ್ಷದಿಂದ ಒಂದು ದಿನವೂ ಬಿಡುವು ನೀಡದೆ ನಿರಂತರ ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಲ್ಲಿ ಹೋರಾಟ ಮಾಡಿದರೆ ಇಡೀ ಪ್ರಪಂಚಕ್ಕೆ ನಮ್ಮ ಶಕ್ತಿ ಗೊತ್ತಾಗುತ್ತದೆ. ಸ್ವಯಂಪ್ರೇರಿತವಾಗಿ ಜನರಲ್ಲಿ ಆತ್ಮವಿಶ್ವಾಸ ಬಂದಿದೆ ಎಂದು ಹೇಳಿದರು.
ಸಮುದಾಯ ಮುಖ್ಯ: ರಾಜಕೀಯ ಉದ್ದೇಶಕ್ಕಿಂತ ನಮಗೆ ಮೀಸಲಾತಿ ಮುಖ್ಯವಾಗಿದೆ. ನಮಗೆ ಪಕ್ಷ ಮುಖ್ಯ ಅಲ್ಲ, ಸಮಾಜ ಮುಖ್ಯ ಅಲ್ಲ, ನಮ್ಮ ಸಮುದಾಯದವರನ್ನು ಜಾಗೃತಿಗೊಳಿಸುವುದು ಮುಖ್ಯವಾಗಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಸರ್ಕಾರದ ಕಳಪೆ ಸಾಧನೆ