ಅಥಣಿ: ನಗರದ ಮಿನಿ ವಿಧಾನಸೌಧದಲ್ಲಿ ಕೊರೊನಾ ವೈರಸ್ ಭಯವಿಲ್ಲದೆ ಜನಜಂಗುಳಿ ಸೇರುತ್ತಿರುವುದರಿಂದ ಜನರಲ್ಲಿ ಆತಂಕ ಮೂಡಿಸಿದೆ.
ಸತತ ಮೂರು ತಿಂಗಳಿಂದ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣೆ ಇಲ್ಲದೆ ಜನಸಾಮಾನ್ಯರು ಸರ್ಕಾರ ಮಟ್ಟದ ಕೆಲಸಗಳು ಆಗದೇ ಪರದಾಡುವಂತಾಗಿತ್ತು. ಆಹಾರ ಇಲಾಖೆ, ಕಂದಾಯ ಇಲಾಖೆ, ಉಪ ನೋಂದಣಿ ಕಚೇರಿ, ಭೂಮಿ ಇಲಾಖೆ ಹಲವಾರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಪ್ರಾರಂಭವಾಗಿರುವ ಬೆನ್ನಲ್ಲೇ ಅಥಣಿ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುತ್ತಿದ್ದಾರೆ. ನಗರದಲ್ಲಿಯೂ ಸಹ ಕೊರೊನಾ ಪ್ರಕರಣ ದಾಖಲಾಗಿದೆ.
ಆದರೆ ತಾಲೂಕು ಆಡಳಿತ ಕಚೇರಿಗೆ ಬರುವವರ ದೇಹದ ಉಷ್ಣತೆ ತಪಾಸಣೆ ಹಾಗೂ ಸ್ಯಾನಿಟೈಜರ್ ವ್ಯವಸ್ಥೆ ಮಾಡದೆ ಇರುವುದಕ್ಕೆ ಜನ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ದುಂಡಪ್ಪ ಕೋಮಾರರನ್ನು ಕೇಳಿದರೆ, ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆಗೆ ನಾವು ಮೂರು ಜನ ಖಾಸಗಿಯವರನ್ನು ನೇಮಿಸಿದ್ದೇವೆ ಎಂದಿದ್ದಾರೆ. ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಇಲ್ಲಿ ಯಾವುದೇ ನಿಯಮ ಪಾಲನೆ ಇಲ್ಲದೆ ಇರುವುದರಿಂದ ಸಾರ್ವಜನಿಕರು ಭಯದಿಂದ ಕಚೇರಿಗೆ ಬರುವಂತಾಗಿದೆ.