ಅಥಣಿ: ಅಥಣಿ ಕ್ಷೇತ್ರದ ಉಪಚುನಾವಣೆ ಘೋಷಣೆ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆಪರೇಷನ್ ಬಿಜೆಪಿ ರೀತಿ ಈಗ ಕಾಂಗ್ರೆಸ್ ಕೂಡಾ ಆಪರೇಷನ್ ಕಾಂಗ್ರೆಸ್ ತಂತ್ರಕ್ಕೆ ಇಳಿದಿದೆಯಾ? ಎಂಬ ಗುಮಾನಿ ಅಥಣಿ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹೌದು, ಹಾಲಿ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಪ್ಪ ಮುದುಕಣ್ಣವರ ಸದ್ಯ ಕಾಂಗ್ರೆಸ್ ಕಡೆ ಒಲವು ತೋರಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ ಸಿದ್ದಪ್ಪ ಮುದುಕಣ್ಣವರ ಅಥಣಿ ತಾಲೂಕಿನ ಕೋಕಟ್ನೂರ್ 5 ನೇ ಮತ ಕ್ಷೇತ್ರದಿಂದ 2016 ರಲ್ಲಿ ಬಿಜೆಪಿ ಪಕ್ಷದಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಸದ್ಯ ನಿನ್ನೆ ಸಿದ್ದಪ್ಪ ಮುದುಕಣ್ಣವರ ತಮ್ಮ ತೋಟದಲ್ಲಿ ಆಪ್ತ ಬಂಧುಗಳ ಜೊತೆ ಮತ್ತು ಕೋಕಟ್ನೂರ್ ಬ್ಲಾಕ್ ಪಕ್ಷದ ಮುಖಂಡರ ಜೊತೆ ಸಭೆ ಕರೆದು ಮಾತನಾಡಿ ತಾವು ಕಾಂಗ್ರೆಸ್ ಸೇರುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಆದರೆ ಸಭೆಯಲ್ಲಿ ನೆರೆದಿದ್ದ ತಮ್ಮ ಆಪ್ತರು ಇನ್ನೂ 3-4 ದಿನಗಳು ಕಾದು ನೋಡೋಣ. ನಂತರ ಮುಂದಿನ ದಾರಿ ನೋಡಿಕೊಂಡರಾಯಿತು ಎಂದು ಹೇಳಿದ್ದರಿಂದ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಿದ್ದಪ್ಪ ಮುದುಕಣ್ಣವರ ಹೇಳಿದ್ದಾರೆ.