ಗೋಕಾಕ್ : ಬುದ್ಧ, ಬಸವ, ಅಂಬೇಡ್ಕರ್ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ಕಾರ್ಯಕ್ರಮ ನಿಮಿತ್ತ ಹಮ್ಮಿಕೊಂಡಿದ್ದ 'ಮೌಢ್ಯ ವಿರೋಧಿ ದಿನ' ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ಯಾಯಕ್ಕೆ ಒಳಗಾಗಿರುವ ಜನರನ್ನು ನ್ಯಾಯ ನೀಡುವ, ಶೋಷಣೆಗೆ ಒಳಗಾಗಿರುವ ಜನರನ್ನು ಮುಕ್ತಗೊಳಿಸಿ ಸ್ವತಂತ್ರ ನೀಡುವ, ಸಮಾನತೆಯಿಂದಲೇ ಮಾನವೀಯತೆ ಎಂದು ಹೋರಾಡಿದ ಅಂಬೇಡ್ಕರ್, ಬುದ್ಧ, ಬಸವ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಒಂದು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಒಂದಾಗಬೇಕಿದೆ ಎಂದರು.
ಓದಿ : ಸಕಾಲ ಸಪ್ತಾಹದಲ್ಲಿ 16,457 ಅರ್ಜಿಗಳ ವಿಲೇವಾರಿ: ಬೆಳಗಾವಿ ಡಿಸಿ
ಮಾನವ ಬಂಧುತ್ವ ವೇದಿಕೆಯು ನನ್ನ ನೇತೃತ್ವದಲ್ಲಿ ಕಳೆದ ಆರೇಳು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ನಂಬಿಕೆ ಮತ್ತು ಮೂಢನಂಬಿಕೆ ಎರಡು ಬೇರೆ ಬೇರೆ ವಿಚಾರಗಳು, ನಾವು ನಂಬಿಕೆಯ ವಿರುದ್ಧವಿಲ್ಲ ಮೂಢನಂಬಿಕೆಯ ವಿರುದ್ಧ ಇದ್ದೇವೆ. ದೇಶದಲ್ಲಿ ಮೂಢನಂಬಿಕೆಯು ಅಸಮಾನತೆ, ಜಾತಿ, ಮೇಲು ಕೀಳು, ಕೋಮು ಗಲಭೆ ಸೇರಿದಂತೆ ಇತರ ಹಲವು ಅನಾಚಾರಗಳಿಗೆ ಸಾಕ್ಷಿಯಾಗಿದೆ. ಸಮಾನತೆ, ಶೋಷಣೆ, ಜಾತಿ ವ್ಯವಸ್ಥೆ ತೋಲಗಬೇಕೆಂದರೆ ಮೂಢನಂಬಿಕೆಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಇದಕ್ಕೆ ನೀವು ನಮ್ಮ ಜೊತೆ ಬೆನ್ನೆಲುಬಾಗಿ ಸಹಕಾರ ನೀಡಬೇಕು ಎಂದು ಹೇಳಿದರು.
ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರ ವಿಚಾರಗಳನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಅವರನ್ನು ಟೀಕಿಸುವ ಹಾಗೂ ಅಪಮಾನಿಸುವ ಕಾರ್ಯ ನಡೆಯುತ್ತಿದೆ. ಇದನ್ನು ನಾವೆಲ್ಲ ಸೇರಿ ತಡೆಯಬೇಕು, ಅಂಬೇಡ್ಕರ್ ಅವರ ಕನಸನ್ನು ನನಸು ಮಾಡಬೇಕು ಎಂದರು.
ಸಮಾರಂಭದ ವೇದಿಕೆಯಲ್ಲಿ ಯುವ ಮಖಂಡ ರಾಹುಲ್ ಜಾರಕಿಹೊಳಿ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೀವನ್ ಮಾಂಜ್ರೆಕರ್, ಬಿ.ಎಸ್ ನಾಡಕರ್ಣಿ, ಗೋಕಾಕ್ ನಗರಸಭೆ ಸದಸ್ಯೆ ಹಾಗೂ ಮರಾಠ ಸಮಾಜದ ಮುಖಂಡೆ ಜೋತಿಬಾ ಸುಬಂಜಿ, ಚರಂತ್ವೇಶರ ಮಠದ ಶರಣ ಬಸವ ದೇವರು ಮತ್ತಿತರರು ಉಪಸ್ಥಿತರಿದ್ದರು.