ಬೆಳಗಾವಿ: ಚಿರತೆ ಶೋಧಕ್ಕೆ ಬೆಳಗಾವಿಗೆ ಬಂದಿರುವ ಗಜಪಡೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಬ್ಬು ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ. ನಗರದ ಗಾಲ್ಫ್ ಕ್ಲಬ್ ಮೈದಾನದಲ್ಲಿ ಅವಿತುಕೊಂಡು ಪ್ರತಿದಿನವೂ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ ಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ನಿಂದ ಎರಡು ಆನೆಗಳನ್ನು ತರಲಾಗಿದೆ. ಗಜಪಡೆಗಳ ಹೊಟ್ಟೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ರೈತರು ಬೆಳೆದ ಕಬ್ಬಿನ ಬೆಳೆಯನ್ನು ಕದ್ದಿದ್ದಾರೆ ಎನ್ನಲಾಗ್ತಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಸಿಎಫ್ ಮಂಜುನಾಥ್ ಚವ್ಹಾಣ, ಮುತಗಾ ಗ್ರಾಮದ ರೈತನ ಕಬ್ಬನ್ನು ಕಟಾವು ಮಾಡಿರುವ ವಿಚಾರ ಮಾಧ್ಯಮಗಳ ಮೂಲಕವೇ ನನ್ನ ಗಮನಕ್ಕೆ ಬಂದಿದೆ. ಆ ಕೆಲಸದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಡಿಎಫ್ಓ ಅವರಿಗೆ ಸೂಚಿಸಿದ್ದೇನೆ. ಹಿರಿಯ ಅಧಿಕಾರಿಗಳು ಯಾರೂ ಕೂಡ ಅವರಿಗೆ ಈ ರೀತಿ ಹೇಳಿರುವುದಿಲ್ಲ ಎಂದು ಸಮರ್ಥಿಸಿಕೊಂಡರು.
ಚಿರತೆ ಕಾರ್ಯಾಚರಣೆ ವಿಚಾರವಾಗಿ ಮಾತನಾಡಿ, ಚಿರತೆ ಕಾಡು ಪ್ರಾಣಿ, ಕಾಡಿನಲ್ಲಿ ಬೇರೆ ಪ್ರಾಣಿಗಳನ್ನೇ ತಿಂದು ಬದುಕುತ್ತದೆ. ಅದು ಅದರ ಸಹಜ ಗುಣ. ಆದರೆ ಬೆಳಗಾವಿಯ ಗಾಲ್ಫ್ ಮೈದಾನದ ಪ್ರದೇಶದಲ್ಲಿ ನವಿಲನ್ನು ತಿಂದಿರುವ ಕುರುಹು ಪತ್ತೆಯಾಗಿಲ್ಲ. ಹಂದಿಯನ್ನು ತಿಂದಿರುವ ಕುರುಹು ಪತ್ತೆಯಾಗಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ಚಿರತೆ ಸೆರೆ ಕಾರ್ಯಾಚರಣೆ.. ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ 2 ಆನೆಗಳ ಆಗಮನ
ಆನೆಗಳ ಜೊತೆಗೆ ಡಾ.ವಿನಯ್, ಡಾ.ನಿಖಿಲ್ ನೇತೃತ್ವದ ಎರಡು ತಂಡಗಳು ಚಿರತೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿವೆ. ಎರಡೂ ಆನೆಗಳು ಒಟ್ಟಿಗೆ ಹೋಗಿ ಚಿರತೆ ಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ. ನಿನ್ನೆ ರಾತ್ರಿ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ದೃಶ್ಯ ಪತ್ತೆಯಾಗಿದೆ. ಅರಣ್ಯ ಇಲಾಖೆ ಸಚಿವರು ಕೂಡ ಚರ್ಚೆ ಮಾಡಿ ಸೂಚನೆ ಕೊಟ್ಟಿದ್ದರು. ಅದರ ಪ್ರಕಾರ ನಾವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಸಕ್ರೆಬೈಲ್ನಿಂದ ಆನೆಗಳು ಕೂಡ ಬಂದಿವೆ ಎಂದರು.