ಬೆಳಗಾವಿ: ನಗರವನ್ನೇ ಬೆಚ್ಚಿಬೀಳಿಸಿದ್ದ ರೌಡಿ ಶಹಬಾಜ್ ಪಠಾಣ್ ಹತ್ಯೆ ಪ್ರಕರಣದ ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದ ಬಸವರಾಜ್ ದಡ್ಡಿ (24) ಹಾಗೂ ಬಸವಣ್ಣಿ ನಾಯಿಕ (27) ಬಂಧಿತರು. ಹಳೇ ವೈಷಮ್ಯದಿಂದ ಆರೋಪಿತರು ರೌಡಿಶಹಬಾಜ್ ಪಠಾಣ್ನನ್ನು ಹತ್ಯೆಗೈದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಹತ್ಯೆ ಪ್ರಕರಣ ಸಂಬಂಧ ಶಹಬಾಜ್ ಪಠಾಣ್ ಸಂಬಂಧಿಕರು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ದೂರು ದಾಖಲಿಸಿಕೊಂಡು ಕೆಲ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಮನೆಯಲ್ಲಿ ನೆತ್ತರು: ಮಾಳಮಾರುತಿ ಠಾಣೆ ವ್ಯಾಪ್ತಿಯ ರೆಸ್ಟೊರೆಂಟ್ವೊಂದರಲ್ಲಿ ಶಹಬಾಜ್ ಪಠಾಣ್ ಸ್ನೇಹಿತನ ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಬರ್ತಡೇ ಪಾರ್ಟಿ ಮುಗಿಯುತ್ತಿದ್ದಂತೆ ಹೊರಬಂದ ಶಹಬಾಜ್ ಬೈಕ್ ಮೇಲೆ ಮನೆಗೆ ಹೊರಟಿದ್ದರು. ಆಗ ವಾಹನವೊಂದರಲ್ಲಿ ಬಂದ ಹಂತಕರು ರೌಡಿ ಪಠಾಣ್ ಬೈಕಿಗೆ ಗುದ್ದಿದ್ದಾರೆ. ಶಹಬಾಜ್ ಕೆಳಗೆ ಬೀಳುತ್ತಿದ್ದಂತೆ ಆರೋಪಿಗಳು ವಾಹನದಲ್ಲಿದ್ದ ಮಚ್ಚು ಹಾಗೂ ಇತರ ಮಾರಕಾಸ್ತ್ರಗಳನ್ನು ಹೊರತೆಗೆದಿದ್ದಾರೆ. ಮಾರಕಾಸ್ತ್ರಗಳನ್ನು ನೋಡಿದ ಶಹಬಾಜ್ ಅಲ್ಲಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದ.
ಓದಿ:ಕುಂದಾನಗರಿಯಲ್ಲಿ ಆಯುಧ ಪೂಜೆಯಂದೇ ಹರಿಯಿತು ನೆತ್ತರು: ರೌಡಿಯ ಬರ್ಬರ ಹತ್ಯೆ
ಆರೋಪಿಗಳು ಶಹಬಾಜ್ನನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಶಿವಬಸವ ನಗರದಲ್ಲಿ ನಿವೃತ್ತ ಡಿವೈಎಸ್ಪಿ ಪಾಂಡುರಂಗ ನೀಲಗಾರ ಎಂಬುವರ ಮನೆಯ ಗೇಟ್ ಕೂಡ ತೆರೆದಿತ್ತು. ರಾತ್ರಿಯಾದರೂ ಪಾಂಡುರಂಗ ನೀಲಗಾರ ಹಾಗೂ ಅವರ ಪತ್ನಿ ಮನೆ ಎದುರೇ ಕುಳಿತಿದ್ದರು. ಆಗ ಶಹಬಾಜ್ ಆರೋಪಿಗಳಿಂದ ರಕ್ಷಿಸಿಕೊಳ್ಳಲು ನಿವೃತ್ತ ಡಿವೈಎಸ್ಪಿ ಮನೆ ಆವರಣದ ಗೇಟ್ ಒಳಗೆ ನುಗ್ಗಿದ್ದಾನೆ. ಇದನ್ನು ಗಮನಿಸಿದ ಕಿರಾತಕರು ಗೇಟ್ ಒಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ.
ಗಲಾಟೆ ಬಿಡಿಸಲು ಬಂದ ನಿವೃತ್ತ ಡಿವೈಎಸ್ಪಿ ಪಾಂಡುರಂಗ ನೀಲಗಾರ ಹಾಗೂ ಅವರ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಪಾಂಡುರಗ ನೀಲಗಾರ ದಂಪತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಳೇ ದ್ವೇಷ ಹತ್ಯೆಯಲ್ಲಿ ಅಂತ್ಯ: ಕಾಕತಿ ಮೂಲದ ಶಹಬಾಜ್ ಪಠಾಣ್ ಹಾಗೂ ಬಂಧಿತರ ಮಧ್ಯೆ ಹಳೆಯ ದ್ವೇಷವಿತ್ತು. ಕೆಲ ವರ್ಷಗಳ ಹಿಂದೆ ಬಸವರಾಜ್ ದಡ್ಡಿ, ಹಾಗೂ ಬಸವಣ್ಣಿ ನಾಯಿಕ ಬೈಕ್ ಮೇಲೆ ಹೋಗುತ್ತಿದ್ದರು. ಆಗ ಬೈಕ್ನ ರಾಡಿ ಶಹಬಾಜ್ಗೆ ತಾಗಿತ್ತು. ಆಗ ಶಹಬಾಜ್ ಬಸವರಾಜ್ ದಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಕಾಕತಿ ಠಾಣೆಯಲ್ಲಿ ಬಸವರಾಜ್ ದಡ್ಡಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಆಗ ಶಹಬಾಜ್ ಪಠಾಣ್ನನ್ನು ಕಾಕತಿ ಪೊಲೀಸರು ಬಂಧಿಸಿದ್ದರು. ಇತ್ತ ಹಲ್ಲೆಗೊಳಗಾಗಿದ್ದ ಬಸವರಾಜ್ ದಡ್ಡಿ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿ ಬಿಡುಗಡೆ ಆಗಿದ್ದನು. ಆ ಹಳೇ ದ್ವೇಷದಿಂದಲೇ ಶಜಬಾಜ್ನನ್ನು ಹತ್ಯೆಗೈದು ಸೇಡು ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.