ಬೆಂಗಳೂರು: ಯಶವಂತಪುರ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದು, ಈ ವೇಳೆ ತನಗೆ ದುಡ್ಡು ಕೊಟ್ಟಿಲ್ಲ ಎಂದು ಮಹಿಳೆಯೋರ್ವರು ಆರೋಪಿಸಿದ್ದಾರೆ.
ಮತ ಚಲಾವಣೆ ಸಂದರ್ಭದಲ್ಲಿ ಮತದಾರರಿಗೆ ಬಿಜೆಪಿ ಕಾರ್ಯಕರ್ತರು ಹಣ ಹಂಚುತ್ತಿದ್ದಾಗ ಬಂದ ಮಹಿಳೆಯೊಬ್ಬರು ತನಗೂ ಹಣ ನೀಡುವಂತೆ ಕೇಳಿದ್ದಾರೆ. ಆದರೆ, ಕಾರ್ಯಕರ್ತರು ನಿರಾಕರಿಸಿದ ಪರಿಣಾಮ ಬೇರೆಯವರಿಗೆ ಹಣ ನೀಡಿದ್ದಾರೆ. ತನಗೆ ಹಣ ನೀಡಿಲ್ಲ ಎಂದು ಮಹಿಳೆ ಕಣ್ಣೀರು ಹಾಕುತ್ತಾ ಮತ ಚಲಾಯಿಸದೆ ಹಿಂತಿರುಗಿದ್ದಾರೆ. ಈ ವೇಳೆ ಅವರ ಸ್ನೇಹಿತೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದಾರೆ.
ಮೂಲಗಳ ಪ್ರಕಾರ ಕೇವಲ ಒಂದು ಮತಕ್ಕೆ ಹಣ ನೀಡುತ್ತಿಲ್ಲ. ಆದರೆ ಕುಟುಂಬ ಸಮೇತ ಬಂದು ಮತಚಲಾವಣೆ ಮಾಡಿದರೆ ಒಂದು ವೋಟಿಗೆ ₹ 1000 ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಗ್ಗಲಿಪುರದಲ್ಲಿ ಹಣ ಹಂಚಿಕೆ?: ಇದೇ ಕ್ಷೇತ್ರದ ಕಗ್ಗಲೀಪುರದಲ್ಲಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾರ್ಯಕರ್ತನೊಬ್ಬ ಬೈಕ್ನಲ್ಲಿ ಬಂದು ಮತದಾರರಿಗೆ ಹಣ ಹಂಚಿಕೆ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಜೆಡಿಎಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.