ಬೆಂಗಳೂರು: ಜೀವನದಲ್ಲಿ ಬರುವ ಸಮಸ್ಯೆಗಳನ್ನೇ ನಮ್ಮ ಸಾಧನೆಗೆ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಾಗಲೇ ನಮ್ಮ ಬದುಕಿಗೊಂದು ಅರ್ಥ. ದೈಹಿಕ ನ್ಯೂನತೆ ಇದ್ದರೂ ಅದ್ಯಾವುದು ಸಾಧನೆಗೆ ಅಡ್ಡಗೋಡೆ ಆಗಬಾರದು ಅಂತ ಯೋಚಿಸುವವರು ಬಹಳ ಅಪರೂಪ. ಮನಸ್ಸಿದ್ದರೆ ಮಾರ್ಗ ಅನ್ನೋ ಮಾತು ಬಹುಶಃ ಇವತ್ತು ನಾವು ಹೇಳ ಹೊರಟಿರುವ ಬಾಲೆಗೆ ಒಪ್ಪುತ್ತೆ.
ನನ್ನ ಕೈನಲ್ಲಿ ಆಗಲ್ಲ, ಮಾಡೋಲ್ಲ ಅನ್ನುವವರ ಮಧ್ಯೆ, ಕಷ್ಟಪಟ್ಟರಷ್ಟೇ ಅದಕ್ಕೆ ಪ್ರತಿಫಲ ಸಿಗುತ್ತೆ ಅನ್ನೋ ಗಟ್ಟಿಗಿತ್ತಿ ಬಾಲಕಿಯ ಕಥೆ ಇದು. ಹೆಸರು ಜಿ. ಯಶಸ್ವಿನಿ, ಎಲ್ಲರಂತೆ ಆಟ-ಪಾಠದಲ್ಲಿ ಮುಂದಿದ್ದ ಪೋರಿ. ಓದಿನಲ್ಲಿ ಚುರುಕಿದ್ದ ಈಕೆಯ ಆತ್ಮವಿಶ್ವಾಸಕ್ಕೆ ಕುಟುಂಬದವರು ಸಹ ತಲೆಬಾಗಿದ್ದಾರೆ. ಅಂದಹಾಗೇ, ತನ್ನ ಹತ್ತನೇ ವರ್ಷಕ್ಕೆ ಪ್ರಾರಂಭವಾದ ಮೂಳೆಯ ಸಮಸ್ಯೆಯಿಂದ ಹೆಚ್ಚು ಹೊತ್ತು ಕೂರಲಾರಳು.
ಮೂಳೆ ಸವೆತ ರೋಗದಿಂದ ಬಳಲುತ್ತಿರುವ ಯಶಸ್ವಿನಿ ಕೊರೊನಾ ಸೋಂಕಿಗೂ ಸೆಡ್ಡು ಹೊಡೆದು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಳು. ಬೆಂಗಳೂರಿನ ಕಾವೇರಿ ಪುರದ ಆರ್.ಎಸ್.ಕಾನ್ವೆಂಟ್ ಪರೀಕ್ಷಾ ಕೇಂದ್ರದಲ್ಲಿ ಚಾಪೆ ಮೇಲೆ ಮಲಗಿಕೊಂಡೆ ಪರೀಕ್ಷೆ ಬರೆದಿದ್ದಳು. ಅನಾರೋಗ್ಯ ಸಮಸ್ಯೆ ಇದ್ದರೂ, ತಾನು ಕಂಡಿದ್ದ ಕನಸು ನನಸು ಮಾಡಿಕೊಳ್ಳಲು ಪರೀಕ್ಷೆ ಬರೆದಿದ್ದ ಆಕೆ ಈಗ ಶೇ.80 ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದಾಳೆ.
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ:
ಈ ಛಲಗಾತಿಯ ಸಾಧನೆಗೆ ಇಂದು ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಾಕ್ಷಿಯಾಗಿ, ಆಕೆಯ ಮನೆಗೆ ಭೇಟಿ ನೀಡಿ ಸಿಹಿ ತಿನಿಸಿ ಅಭಿನಂದಿಸಿದರು. ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್, ಮೂಳೆಯ ಸಮಸ್ಯೆಯಿಂದ ಹೆಚ್ಚು ಹೊತ್ತು ಕೂರಲು ಆಗದೇ ಇದ್ದರೂ, ಪರೀಕ್ಷೆಯನ್ನ ಬರೆದೇ ತೀರುತ್ತೇನೆ ಎಂಬ ಛಲವನ್ನ ತೋರಿಸಿ ಯಶಸ್ವಿನಿ ಸುಮಾರು ಶೇ.80 ಅಂಕಗಳನ್ನ ಗಳಿಸಿದ್ದಾಳೆ.
ಯಶಸ್ವಿನಿ ತಂದೆ ಗೋವಿಂದ್ ರಾಜು ಹಾಗೂ ತಾಯಿ ಸವಿತಾರಿಗೆ ಮೂವರು ಮಕ್ಕಳು. ಅವರಲ್ಲಿ ಯಶಸ್ವಿನಿಯೇ ಮೊದಲ ಮಗಳು. ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿ ವಾಸವಿದ್ದಾರೆ. ಪರೀಕ್ಷೆ ಸಮಯದಲ್ಲಿ ಕೈಗೆ ಗಾಯವಾಗಿದ್ದಾಗ ಪೋಷಕರು ಪರೀಕ್ಷೆ ಬರೆಯೋದು ಬೇಡ ಅಂದಿದ್ದರಂತೆ. ಆದರೆ ಅದಕ್ಕೆ ಒಪ್ಪದೇ ತಾನು ಪರೀಕ್ಷೆಯನ್ನ ಬರೆದೆ ಅಂತ ಯಶಸ್ವಿನಿ ತಿಳಿಸಿದ್ದಾಳೆ.