ಬೆಂಗಳೂರು: 48 ರಿಂದ 72 ಗಂಟೆಯೊಳಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತವಾಗಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಅರಮನೆ ಮೈದಾನದಲ್ಲಿರುವ ಗಾಯಿತ್ರಿ ವಿಹಾರ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಶ್ರೀಮದ್ರಂಭಾಪುರಿ ವೀರ ಸಿಂಹಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜಾ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮಜಾಗೃತಿ ಸಮ್ಮೇಳನ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿದ ಜನಾರ್ದನ ರೆಡ್ಡಿ, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿಯೇ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಆದರೆ 8-10 ಸ್ಥಾನಗಳ ಕೊರತೆಯಿಂದಾಗಿ ಅದು ತಪ್ಪಿತ್ತು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧರ್ಮ ವಿಭಜನೆ ಮಾಡಿದವರನ್ನು ಶಿವ 3ನೇ ಕಣ್ಣು ಬಿಟ್ಟು ಭಸ್ಮ ಮಾಡುತ್ತಾನೆ ಎಂದಿದ್ದೆ. ಅದರಂತೆಯೇ ಹಿಂದಿನ ಸರ್ಕಾರ ಭಸ್ಮ ಆಗಿದೆ. ಅಲ್ಪಸ್ವಲ್ಪ ಉಳಿದ ಸರ್ಕಾರ ನಾಳೆ ನಾಡಿದ್ದರಲ್ಲಿ ಭಸ್ಮ ಆಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಯಾವುದಾದರೂ ಒಂದು ಕಡೆ 500 ಎಕರೆ ಜಾಗದಲ್ಲಿ ಜಗದ್ಗುರು ಪಂಚಾಚಾರ್ಯರು ಮತ್ತು ಆದಿ ಜಗದ್ಗುರು ರೇಣುಕಾಚಾರ್ಯರ ತಲಾ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಿ ಆ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಮಾಡುವುದಾಗಿ ಭರವಸೆ ನೀಡಿದರು.
ಧರ್ಮಜಾಗೃತಿ ಸಮ್ಮೇಳನದ ಅಧ್ಯಕ್ಷತೆಯನ್ನು ಮೇಯರ್ ಗಂಗಾಂಬಿಕೆ ವಹಿಸಿದ್ದರು. ಜಗದ್ಗುರು ಶ್ರೀ ಪ್ರಸನ್ನ ರೇಣುಕಾ, ಡಾ. ಸೋಮೇಶ್ವರ ರಾಜ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಶೈವ ಮುಖಂಡ ಪರಮಶಿವಯ್ಯ ಸೇರಿದಂತೆ ನೂರಾರು ಮಠಾಧಿಪತಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.