ಬೆಂಗಳೂರು: ಬಿಡಿಎ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯಿಂದ ಅನ್ಯಾಯಕ್ಕೊಳಗಾದ ರೈತರು, ಹಾಗೂ ರೈತ ಮಹಿಳೆಯರು ಪೊರಕೆ ಚಳವಳಿ ನಡೆಸುತ್ತಿದ್ದಾರೆ.
ಶುಕ್ರವಾರದಿಂದ ನಿರಂತರ ಐದು ದಿನದಿಂದ ಅಹೋರಾತ್ರಿ ಧರಣಿ ಕುಳಿತಿರುವ ರೈತರು, ಭೂಮಿಗೆ ಸೂಕ್ತ ಪರಿಹಾರ ನೀಡಿ ಇಲ್ಲವೇ ಯೋಜನೆಯನ್ನೇ ಕೈಬಿಡಿ ಎಂದು ಆಗ್ರಹಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 16 ವರ್ಷದಿಂದಲೂ ಪರಿಹಾರ ನೀಡದೇ ಸರ್ಕಾರ, ಬಿಡಿಎ ರೈತರಿಗೆ ಸಂಕಷ್ಟ ನೀಡುತ್ತಿದೆ. ಕಾಲಾವಕಾಶ ಕೇಳಿ ಸುಖಾಸುಮ್ಮನೆ ದಿನ ಮುಂದೂಡುತ್ತಿದೆ. ಆದರೆ, ಯಾವುದೇ ಪರಿಹಾರ ನೀಡುತ್ತಿಲ್ಲ. ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಪ್ರತೀ ಸಾರಿ ನಮ್ಮ ಕೆಲಸ ಬಿಟ್ಟು ಬಂದು ಧರಣಿ ನಡೆಸುತ್ತಿದ್ದೇವೆ. ಆದ್ರೆ ಇಂದು ಖಾಲಿ ಕೈಯಲ್ಲಿ ವಾಪಸ್ ಆಗಲ್ಲ. ತೀರ್ಮಾನ ಆಗಲೇಬೇಕು. ಮನೆಯಲ್ಲಿ ನಮ್ಗೆ ಕೆಲಸ ಇಲ್ವಾ?, ಇಂದು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಪೊರಕೆ ಪೂಜೆ ಮಾಡೋದೇ ಎಂದು ರೈತ ಮಹಿಳೆ ಲಿಂಗಮ್ಮ ಆಕ್ರೋಶ ವ್ಯಕ್ತ ಪಡಿಸಿದರು.