ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆ ವಿಧಾನಪರಿಷತ್ ಸದಸ್ಯರಿಗೆ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಲಾಗಿದೆ. ನಾಳೆಯಿಂದ ಫೆ. 25ರ ವರೆಗೆ ಪರಿಷತ್ ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಠೋಡ್ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ.
ವಿಧಾನಸಭೆಯಲ್ಲೂ ವಿಪ್ ಜಾರಿ: ಕಾಂಗ್ರೆಸ್ ಪಕ್ಷದ ವಿಧಾನಸಭೆ ಸದಸ್ಯರಿಗೂ ಕಡ್ಡಾಯ ಹಾಜರಾತಿಗಾಗಿ ವಿಪ್ ಜಾರಿ ಮಾಡಲಾಗಿದೆ. ಇಂದು ಸಂಜೆಯವರೆಗೆ ಜಾರಿಯಲ್ಲಿರುವಂತೆ ಮೂರು ದಿನಗಳ ಹಿಂದೆ ಒಂದು ವಿಪ್ ಅನ್ನು ವಿಧಾನಸಭೆ ಪ್ರತಿಪಕ್ಷ ಕಾಂಗ್ರೆಸ್ ಸಚೇತಕ ಡಾ. ಅಜಯ್ ಸಿಂಗ್ ವಿಪ್ ಜಾರಿ ಮಾಡಿದ್ದರು. ಇದೀಗ ಈ ವಾರಾಂತ್ಯದವರೆಗೂ ವಿಧಾನಮಂಡಲ ಉದಯ ಸದನಗಳ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೂ ವಿಸ್ತರಣೆಯಾಗುವ ಮತ್ತೊಂದು ವಿಪ್ ಜಾರಿಗೊಳಿಸಿದ್ದಾರೆ.

ವಿಧಾನಮಂಡಲ ಉಭಯ ಸದನಗಳಲ್ಲಿಯೂ ಸಚಿವ ಕೆ. ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. ಇಂದೂ ಸಹ ಪ್ರತಿಭಟನೆ ಮುಂದುವರೆಸಿದ್ದು, ಸಚಿವರ ರಾಜೀನಾಮೆಗೆ ಒತ್ತಾಯಿಸಿ ತನ್ನ ಹೋರಾಟವನ್ನು ಮುಂದುವರೆಸಿದೆ. ವಿಧಾನಮಂಡಲ ಉಭಯ ಸದನಗಳ ಅಧಿವೇಶನವನ್ನು ಕಾಂಗ್ರೆಸ್ ಹೋರಾಟದ ಕಾರಣ ನೀಡಿ ಅನಿರ್ದಿಷ್ಟಾವಧಿಗೆ ಮುಂದೂಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂದರ್ಭ ಸದಸ್ಯರ ಸಂಖ್ಯೆ ಕಡಿಮೆ ಇದ್ದರೆ ಹೋರಾಟಕ್ಕೆ ಹಿನ್ನಡೆ ಆಗಲಿದೆ ಎಂಬ ಉದ್ದೇಶದಿಂದ ಈ ವಿಪ್ ಜಾರಿಗೊಳಿಸಲಾಗಿದೆ.
ಇದರ ಜೊತೆ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಯಾವುದಾದರೂ ವಿಶೇಷ ಕಾಯ್ದೆಯನ್ನು ಅನಿರೀಕ್ಷಿತವಾಗಿ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಸಹ ಇರುವ ಹಿನ್ನಲೆ ಪಕ್ಷಕ್ಕೆ ಯಾವುದೇ ತೊಂದರೆ ಆಗದಿರಲಿ ಎಂಬ ಉದ್ದೇಶದಿಂದ ವಿಪ್ ಜಾರಿ ಮಾಡಲಾಗಿದೆ.
ಓದಿ: ಮೇಲ್ನೋಟಕ್ಕೆ ಹರ್ಷ ಹತ್ಯೆ ಪೂರ್ವ ನಿಯೋಜಿತ ಕೃತ್ಯವಾಗಿ ಕಂಡು ಬರುತ್ತಿದೆ: ಸಚಿವ ಡಾ. ಕೆ ಸುಧಾಕರ್