ಬೆಂಗಳೂರು : ಭಾರತ ಧರ್ಮ ಛತ್ರ ದೇಶವಲ್ಲ. ರೋಹಿಂಗ್ಯಾಗಳು ಸೇರಿದಂತೆ ಅಕ್ರಮವಾಗಿ ನೆಲೆಸಿರುವ ಎಲ್ಲರನ್ನೂ ಹೊರ ಹಾಕುತ್ತೇವೆ ಎಂದು ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದರು.
ವಿರಾಟ್ ಹಿಂದೂಸ್ತಾನ್ ಸಂಗಮ್ ವತಿಯಿಂದ ಡಾ. ಸುಬ್ರಮಣ್ಯನ್ ಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ನಾನು ಬಹಳ ವರ್ಷಗಳಿಂದ ಬಲ್ಲೆ. ಯಡಿಯೂರಪ್ಪ ಹಳ್ಳಿ- ಹಳ್ಳಿಗೂ ಸಂಚರಿಸಿ ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದವರು. ಕೆಲವರು ಹೊಟ್ಟೆ ಕಿಚ್ಚಿಗೆ ಅವರನ್ನು ದ್ವೇಷಿಸುತ್ತಾರೆ. ಆದರೆ, ನಾನು ಯಡಿಯೂರಪ್ಪನವರ ಜೊತೆಗೆ ಇರುತ್ತೇನೆ ಎಂದರು.
ಹಿಂದುತ್ವ, ಭ್ರಷ್ಟಾಚಾರ ಮುಕ್ತ ಹಾಗೂ ಆರ್ಥಿಕ ಸುಧಾರಣೆ ಕಳೆದ ಚುನಾವಣೆ ಅಜೆಂಡಾ ಆಗಿತ್ತು. ನನ್ನ ಹಿಂದುತ್ವ ಕೇವಲ ಹಿಂದೂಗಳಿಗೆ ಸೀಮಿತ ಅಲ್ಲ. ಎಲ್ಲಾ ಧರ್ಮದವರಿಗೂ ಹಿಂದೂತ್ವ ಅನ್ವಯ ಆಗುತ್ತದೆ. ಇಸ್ಲಾಂ ಧರ್ಮ ಪೈಗಂಬರ್ ಬಿಟ್ಟರೆ ಬೇರೆ ದೇವರಿಲ್ಲ ಎನ್ನುತ್ತದೆ. ಕ್ರೈಸ್ತ ಧರ್ಮ ಏಸು ಬಿಟ್ಟರೆ ಬೇರೆ ದೇವರಿಲ್ಲ ಎನ್ನುತ್ತದೆ. ಆದರೆ, ಹಿಂದೂ ಧರ್ಮ ಮಾತ್ರ ಎಲ್ಲಾ ಧರ್ಮದ ದೇವರನ್ನು ಒಪ್ಪಿ ಗೌರವಿಸುತ್ತದೆ ಎಂದರು.
ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಪಡಿಸಿದಾಗ ಏನೋ ಆಗಿಬಿಡಲಿದೆ ಎಂದಿದ್ದರು. ಆದರೆ, ಏನೂ ಆಗಿಲ್ಲ. ಕಾಶ್ಮೀರದಲ್ಲಿ ನಡೆಯುತ್ತಿದ್ದ ಹಿಂಸಾಚಾರ ಈಗ ಕಡಿಮೆಯಾಗಿದೆ. ಸಾವಿನ ಸಂಖ್ಯೆ 300 ರಿಂದ 10ಕ್ಕೆ ಇಳಿದಿದೆ. ಕೆಲವರು ಜೈಲಿನಲ್ಲಿದ್ದಾರೆ. ಹೊರಗೆ ಬಂದರೆ ಅವರನ್ನು ಭಯೋತ್ಪಾದಕರು ಕೊಲ್ಲುತ್ತಾರೆ. ಹೀಗಾಗಿ, ಅವರ ರಕ್ಷಣೆಗಾಗಿ ಅವರನ್ನು ಜೈಲಿನಲ್ಲಿ ಇರಿಸಿದ್ದೇವೆ ಎಂದು ರಾಜಕೀಯ ನಾಯಕರ ಗೃಹ ಬಂಧನವನ್ನು ಸಮರ್ಥಿಸಿಕೊಂಡರು.
ಸಿಎಎ ಮತ್ತು ಎನ್ಆರ್ಸಿಗೆ ಕಾಂಗ್ರೆಸ್ ಮಾತ್ರ ವಿರೋಧ ಮಾಡುತ್ತಿದೆ. ಸದನದಲ್ಲಿ ವಿಧೇಯಕ ಮಂಡಿಸಿದಾಗ ಚರ್ಚೆ ನಡೆಸದೆ ಈಗ ವಿರೋಧಿಸುತ್ತಿದ್ದಾರೆ. ಅಂದು ಕಾಯ್ದೆ ಓದಲಿಲ್ಲ, ಸರಿಯಾಗಿಯೂ ಅರ್ಥಮಾಡಿಕೊಂಡಿಲ್ಲ. ಹಾಗಾಗಿ ವಿರೋಧ ಮಾಡುತ್ತಿದ್ದಾರೆ. ಇದು ಪೌರತ್ವ ನೀಡುವ ಕಾಯ್ದೆ ಮಾತ್ರ ಪಾಕಿಸ್ತಾನ, ಬಾಂಗ್ಲಾ, ಅರಬ್ ದೇಶಗಳು ಶೇ100ರಷ್ಟು ಮುಸ್ಲಿಂ ದೇಶವನ್ನಾಗಿ ಮಾಡಿಕೊಂಡವು. ಬ್ರಿಟನ್ ಸೇರಿ ಹಲವು ರಾಷ್ಟ್ರಗಳು ಶೇ 100ರಷ್ಟು ಕ್ರೈಸ್ತ ದೇಶವನ್ನಾಗಿ ಮಾಡಿಕೊಂಡರು. ಆದರೆ, ನಮ್ಮ ದೇಶ ಮಾತ್ರ ಶೇ 100ರಷ್ಟು ಹಿಂದೂ ರಾಷ್ಟ್ರ ಮಾಡಲು ಹೋಗಿಲ್ಲ. ದೇಶ ವಿಭಜನೆ ಆದಾಗ ಪಾಕಿಸ್ತಾನದಲ್ಲಿ ಹಿಂದೂಗಳು ಶೇ 21ರಷ್ಟು ಇದ್ದರು. ಆದರೆ, ಈಗ 1.5 ಪ್ರತಿಶತ ಸಂಖ್ಯೆಗೆ ಇಳಿದಿದೆ. ಇಷ್ಟೊಂದು ಹಿಂದೂಗಳ ಸಂಖ್ಯೆ ಕುಸಿತಕ್ಕೆ ಕಾರಣವೇನು? ನೆರೆ ರಾಷ್ಟ್ರದ ಧಾರ್ಮಿಕ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾದರೆ ಅವರು ಎಲ್ಲಿಗೆ ಹೋಗಬೇಕು. ಅವರಿಗೆ ಪೌರತ್ವ ನೀಡುವುದು ತಪ್ಪೇ ಎಂದು ಪ್ರಶ್ನಿಸಿದರು.
ಪಾಕಿಸ್ತಾನ, ಬಾಂಗ್ಲಾದಿಂದ ಬರುವ ನುಸುಳುಕೋರರಿಗೆ ಪೌರತ್ವ ನೀಡಲು ಹೇಗೆ ಸಾಧ್ಯ. ನಮ್ಮ ದೇಶದಲ್ಲಿ ಇರುವ ಮುಸ್ಲಿಮರಿಗೆ ನಾವು ಪ್ರಶ್ನಿಸುವುದಿಲ್ಲ. ಆದರೆ, ನುಸುಳುಕೋರರನ್ನು ಒಪ್ಪಲು ನಮ್ಮ ದೇಶ ಧರ್ಮ ಛತ್ರವಲ್ಲ. ರೋಹಿಂಗ್ಯಾಗಳು ಅಕ್ರಮವಾಗಿ ಬಂದಿದ್ದಾರೆ. ಕರ್ನಾಟಕದಲ್ಲೂ ಇರಬಹುದು. ಆದರೆ, ಚಿಂತಿಸಬೇಡಿ ಅವರನ್ನೆಲ್ಲಾ ಹೊರ ಹಾಕುತ್ತೇವೆ ಎಂದರು.
ದೇಶದ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ:
1780 ನಮ್ಮ ದೇಶದ ಜಿಡಿಪಿ ಹೆಚ್ಚಾಗಿತ್ತು. ಸ್ವಾತಂತ್ರ್ಯ ನಂತರ ಜಿಡಿಪಿ ಕಡಿಮೆ ಆಯಿತು. ಭಾರತ ಬಡವಾಗಿ ಬದಲಾಯಿತು. ಮನಮೋಹನ್ ಸಿಂಗ್ ಪ್ರಧಾನಿಯಾಗಿ ಎಲ್ಲಾ ಅಧಿಕಾರವನ್ನು ಹೊಂದಿದ್ದರು. ಆದರೆ, ಅಧಿಕಾರ ಚಲಾಯಿಸಲು ತೆಳ್ಳನೆಯ ಇಟಲಿಯ ಮಹಿಳೆಗೆ ಹೆದರುತ್ತಿದ್ದರು. ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ನರಸಿಂಹರಾವ್ ಅವಧಿಯಲ್ಲಿ ಶೇ 3.5ರಿಂದ ಜಿಡಿಪಿ ಶೇ 8ಕ್ಕೆ ಬಂದಿತ್ತು. ಕೇವಲ ಎರಡು ಅವಧಿಯಲ್ಲಿ ಉತ್ತುಂಗಕ್ಕೇರಿತು. ಇದೀಗ ಶೇ 8ರಷ್ಟು ಮಾತ್ರವಲ್ಲ. ಶೇ.10ರಷ್ಟು ಜಿಡಿಪಿ ಬರಬೇಕು. ದೇಶದಲ್ಲಿ ಇಂದು ಕೂಡ ಆರ್ಥಿಕ ಸ್ಥಿತಿ ಅಪಾಯದಲ್ಲಿದೆ. ಆದರೆ, ಇದರ ಬಗ್ಗೆ ನಾನು ಚಿಂತಿತನಾಗಿಲ್ಲ. ಹಿಂದೆ 1965ರಲ್ಲಿ ಹೇಗೆ ಕ್ರಾಂತಿಗಳ ಮೂಲಕ ಸುಧಾರಣೆ ಬಂತೋ, ಹಾಗೆಯೇ ಈಗ ಕ್ರಾಂತಿ ನಡೆಯುತ್ತದೆ ಎಲ್ಲ ಮುಂದುವರಿದ ರಾಷ್ಟ್ರಗಳಂತೆ ಭಾರತವೂ ಇರಲಿದೆ ಎಂದು ಸುಬ್ರಮಣಿಯನ್ ಹೇಳಿದರು.
ಇತಿಹಾಸ ಪಠ್ಯ ಬದಲಾಗಬೇಕು:
150 ವರ್ಷಗಳ ಆಳಿದ ಮೊಗಲ್ ಇತಿಹಾಸ ಪಠ್ಯ ವಿಸ್ತಾರವಾಗಿದೆ. ಒಬ್ಬೊಬ್ಬ ರಾಜನಿಗೂ ಒಂದೊಂದು ಪಾಠವಿತ್ತು. ಆದರೆ, ಕೃಷ್ಣದೇವರಾಯನಿಗೆ ಎಷ್ಟು ಇತ್ತು. ಹಿಂದೂ ದೊರೆಗಳ ಇತಿಹಾಸ ಹೆಚ್ಚು ಓದಲು ಅವಕಾಶ ಇರಲಿಲ್ಲ. ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಇತಿಹಾಸವೂ ಹೆಚ್ಚು ಬರಲಿಲ್ಲ. ವಿಜಯನಗರ, ಗುರುಗೋವಿಂದ ಸಿಂಗ್, ರಾಣಾ ಪ್ರತಾಪ್ ಸೇರಿ ಅನೇಕರು ಹಿಂದೂ ರಾಜರಿದ್ದರು. ಆದರೆ, ಇತಿಹಾಸದಲ್ಲಿ ಇದೆಲ್ಲ ಕಾಣುವುದಿಲ್ಲ. ಜನರ ಮನಸ್ಥಿತಿಯನ್ನೇ ಬದಲಿಸಿದ ಇತಿಹಾಸ. ಹೀಗಾಗಿ, ನಾನು ಇತಿಹಾಸವನ್ನೇ ಪರಿಷ್ಕರಿಸಬೇಕೆಂದು ಮನವಿ ಮಾಡುತ್ತೇನೆ. ಏಕೆಂದರೆ ಪಠ್ಯದಿಂದ ಇತಿಹಾಸ ಅಪೂರ್ಣವಾಗಿದೆ ಎಂದರು.
ಸಮುದ್ರ ನೀರು ಬಳಕೆಯಿಂದ ಕಾವೇರಿ ಸಮಸ್ಯೆಗೆ ಪರಿಹಾರ:
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಆಗಾಗ ಕಾವೇರಿ ವಿಚಾರವಾಗಿ ಚರ್ಚೆ ಆಗುತ್ತಿರುತ್ತದೆ. ಕಾವೇರಿ ನಮ್ಮದು, ಕಾವೇರಿ ಬಿಡೊಲ್ಲ ಎಂದು ಚರ್ಚೆ ಆಗುತ್ತಿರುತ್ತದೆ. ನಾನು ಚೆನ್ನೈಗೆ ಹೋದಾಗ ಕರ್ನಾಟಕದಿಂದ ನಮಗೆ ಕಾವೇರಿ ನೀರು ಬಿಡುತ್ತಿಲ್ಲ ಎಂದು ಜನರು ಕೇಳುತ್ತಾರೆ. ನನ್ನ ಉತ್ತರ ನೋಡಿ ನೀವು ಕರ್ನಾಟಕದವರೋ ಅಥವಾ ತಮಿಳುನಾಡಿನವರಾ ಎಂದು ಪ್ರಶ್ನಿಸುತ್ತಾರೆ. ನೀರು ಬೇಕಾದರೆ ಕೊಡುತ್ತೇವೆ. ನೀರು ಮತ್ತು ಕಾವೇರಿ ನೀರಿನಲ್ಲಿ ಏನು ವ್ಯತ್ಯಾಸವಿದೆ. ನೀರು ಬೇಕಷ್ಟೆ. ಸಮುದ್ರದ ನೀರನ್ನು ಶುದ್ಧೀಕರಣ ಮಾಡಿ ಬಳಕೆ ಮಾಡುವಂತೆ ಮಾಡಿ ಕೊಡುತ್ತೇವೆ. ಸಮುದ್ರದ ನೀರನ್ನು ಬಳಸಿಕೊಳ್ಳುವ ತಂತ್ರಜ್ಞಾನ ಅವಡಿಸಿಕೊಂಡು ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಕಾವೇರಿ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಿದರು.