ಬೆಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶ ನಕಾರಾತ್ಮಕವಾಗಿ ಬಂದಿದ್ದರೂ, ಪಕ್ಷಕ್ಕೆ ಸಕಾರಾತ್ಮಕವಾಗಿ ಹಲವು ಅಂಶಗಳು ಲಭಿಸಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾದಲ್ಲಿ ಕೇವಲ ಇಬ್ಬರು ಶಾಸಕರು ಇದ್ದರು. ಆದರೂ 12 ಸ್ಥಾನ ಗೆದ್ದಿದ್ದೇವೆ. ಬಿಜೆಪಿಗೆ ಶೇ.37ರಷ್ಟು ಮತಗಳು ಮಾತ್ರ ಬಿದ್ದಿದೆ. ಆಪ್, ಟಿಎಂಸಿಗೆ ಮತ ವಿಭಜನೆಯಾಗಿ ಈ ಫಲಿತಾಂಶ ಬಂದಿದೆ. ಉತ್ತರ ಪ್ರದೇಶದಲ್ಲಿ ಸೋತಿದ್ದರೂ. ನಮ್ಮ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಎಲ್ಲ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.
ನಾವು ವಿಫಲವಾಗಿರುವುದು ಪಂಜಾಬ್ನಲ್ಲಿ ಮಾತ್ರ. ನಮ್ಮ ಕೆಲವು ಆಂತರಿಕ ವಿಚಾರದಿಂದ ಹಿನ್ನೆಡೆಯಾಗಿದೆ. ಆದರೆ ನನಗೆ ರಾಜ್ಯದ ಜನರ ಮೇಲೆ ನಂಬಿಕೆ ಇದೆ. ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ನಾವು ಇಲ್ಲದಿದ್ದರೂ, ಬಿಜೆಪಿ ಕೂಡ ಇಲ್ಲ ಎಂದರು.
ಕರ್ನಾಟಕದಲ್ಲಿ ಈಗಾಗಲೇ 15 ಲಕ್ಷ ಜನ ಪಕ್ಷದ ಸದಸ್ಯರಾಗಿದ್ದು, ಎಲ್ಲರೂ ನಿಷ್ಠಾವಂತ ಸದಸ್ಯರಾಗಿದ್ದಾರೆ. ನಮ್ಮ ಗುರಿ 40 -50 ಲಕ್ಷ. ಕೆಲವು ಬೂತ್ ಮಟ್ಟದಲ್ಲೇ ಸಾವಿರ ಸದಸ್ಯತ್ವ ಆಗಿದೆ. ಗಂಗಾವತಿಯಲ್ಲಿ ಈಗಾಗಲೇ 40 ಸಾವಿರ ದಾಟಿದೆ. ನಮ್ಮ ಕಾರ್ಯಕರ್ತರು ಬಹಳ ಪರಿಶ್ರಮದಿಂದ ಸದಸ್ಯತ್ವ ನೋಂದಣಿ ಮಾಡುತ್ತಿದ್ದಾರೆ ಎಂದು ಡಿಕೆಶಿ ಹೇಳಿದರು.
ಸದಸ್ಯತ್ವ ನೋಂದಣಿ ವಿಚಾರದಲ್ಲಿ ತಾಂತ್ರಿಕ ದೋಷದಿಂದ 4 ಲಕ್ಷದಷ್ಟು ಸದಸ್ಯತ್ವ ಬಾಕಿ ಉಳಿದಿದೆ. ನಮ್ಮ ನೋಂದಾಣಿದಾರರು ಚಿಂತೆ ಮಾಡುವುದು ಬೇಡ. ಸದಸ್ಯತ್ವ ನೋಂದಣಿ ಮುಂದುವರಿಸಿ. ಹಳ್ಳಿಗಳಲ್ಲಿ ಕಾರ್ಯಕರ್ತರು ಪಕ್ಷ ಸೇರಲು ಇಚ್ಚಿಸಿದರೆ ಅವರನ್ನು ಸೇರಿಸಿಕೊಳ್ಳಲು ಬ್ಲಾಕ್ ಮಟ್ಟದಲ್ಲಿ ಅಧಿಕಾರ ಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಯಾದ ನಿರ್ದೇಶಕ ಎಸ್.ನಾರಾಯಣ್: ಪಕ್ಷ ಸೇರ್ಪಡೆ ಬಗ್ಗೆ ಹೇಳಿದ್ದಿಷ್ಟು