ಬೆಂಗಳೂರು : ದೇವಸ್ಥಾನದ ಜಾಗ ಕಬಳಿಕೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ರೈಗೆ ಕರ್ನಾಟಕ ಭೂಕಬಳಿಕ ನಿಷೇಧ ನ್ಯಾಯಾಲಯವು ಮತ್ತೊಮ್ಮೆ 25 ಸಾವಿರ ದಂಡ ವಿಧಿಸಿ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ. 2011 ರಲ್ಲಿ ಬಾಳಪ್ಪ ಹಂದಿಗುಂದ ತಹಶೀಲ್ದಾರ್ ಆಗಿದ್ದ ವೇಳೆ ದೇವಸ್ಥಾನಕ್ಕೆ ಸೇರಿದ ಸರ್ಕಾರಿ ಭೂಮಿಯನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಬಗ್ಗೆ ಬೆಳತ್ತೂರು ಪರಮೇಶ್ ಎಂಬವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಸಂಬಂಧ ತಹಶೀಲ್ದಾರ್ ಅಜಿತ್ ಕುಮಾರ್ ರೈ ಗೆ ಸೂಕ್ತ ದಾಖಲಾತಿಗಳೊಂದಿಗೆ ಹಾಜರಾಗುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು. ಆದರೆ ತಹಶೀಲ್ದಾರ್ ಹಾಜರಾಗದ ಹಿನ್ನೆಲೆಯಲ್ಲಿ ಜುಲೈ 19 ರಂದು ಬೆಳಗ್ಗೆ 11 ಗಂಟೆಗೆ 25 ಸಾವಿರ ದಂಡದ ಜೊತೆಗೆ ಜಾಮೀನು ಸಹಿತ ಬಂಧನ ವಾರೆಂಟ್ ನ್ನು ನೀಡಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ವರ್ಷವೂ ನ್ಯಾಯಾಲಯ ತಹಶೀಲ್ದಾರ್ ಗೆ ದಂಡ ವಿಧಿಸಿ ಬಂಧನ ವಾರೆಂಟ್ ಜಾರಿ ಮಾಡಿತ್ತು.

ಬೆಳತ್ತೂರು ಗ್ರಾಮದ ಸರ್ವೆ ನಂ 57 ರ ಚೌಡೇಶ್ವರಿ ದೇವಾಲಯಕ್ಕೆ ಸೇರಿದ ಕೋಟ್ಯಂತರ ರೂಪಾಯಿ ಬೆಲೆಬಾಳುವ 2 ಎಕರೆ 26 ಗುಂಟೆ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ, ಅಕ್ರಮ ಕಟ್ಟಡಗಳನ್ನು ನಿರ್ಮಿಸಿ ಮಾರಾಟ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ಆರ್ ಟಿಐ ಕಾರ್ಯಕರ್ತ ಬೆಳತ್ತೂರು ಪರಮೇಶ್ ಆರೋಪಿಸಿದ್ದರು.
ಇದನ್ನೂ ಓದಿ : ದಾವಣಗೆರೆ: ಮೃತರ ಹೆಸರಲ್ಲಿ ಜಾಬ್ ಕಾರ್ಡ್ ಮಾಡಿ ಹಣ ಹೊಡೆಯುತ್ತಿದ್ದ ಪಿಡಿಒ ಅಮಾನತು