ಬೆಂಗಳೂರು : ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಜನರ ಸಹಭಾಗಿತ್ವವನ್ನು ಖಾತ್ರಿಪಡಿಸಲು ಹಾಗೂ ಮತದಾನದ ಅರಿವು ಮೂಡಿಸಲು ರಾಜ್ಯ ಚುನಾವಣಾ ಆಯೋಗ ವಿನೂತನ ಕ್ರಮಗಳನ್ನು ಕೈಗೊಂಡಿದೆ. ನಗರವಾಸಿ ಮತದಾರರು ಮತ್ತು ಯುವ ಮತದಾರರನ್ನು ಸೆಳೆಯಲು ವೋಟ್ ಫೆಸ್ಟ್, ಬೈಕ್ ರ್ಯಾಲಿ, ಜಾನಪದ, ಯಕ್ಷಗಾನ, ಬೀದಿನಾಟಕ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರನ್ನು ಮತಗಟ್ಟೆಯತ್ತ ಸೆಳೆಯುವ ಹಲವು ಪ್ರಯತ್ನಗಳು ನಡೆಯುತ್ತಿವೆ.

ಈ ನಿಟ್ಟಿನಲ್ಲಿ ಪ್ರತಿಭಾವಂತ ತೃತೀಯ ಲಿಂಗಿ ಕಲಾವಿದರ ತಂಡ ಅರವಾಣಿ ಆರ್ಟ್ ಪ್ರಾಜೆಕ್ಟ್ ಮೂಲಕ ಗೋಡೆಗಳ ಮೇಲೆ ಚುನಾವಣಾ ಜಾಗೃತಿಯ ಚಿತ್ತಾರಗಳನ್ನು ಬಿಡಿಸಿದ್ದು ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ. ದೇಶದಲ್ಲಿ ಈವರೆಗೂ 400ಕ್ಕಿಂತ ಹೆಚ್ಚಿನ ಚುನಾವಣೆಗಳನ್ನು ಭಾರತ ಚುನಾವಣಾ ಆಯೋಗ ಯಶಸ್ವಿಯಾಗಿ ನಿರ್ವಹಿಸಿದೆ. ಅದರಲ್ಲಿ ಮುಖ್ಯವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ ಮತ್ತು ಲೋಕಸಭೆ, ಎಲ್ಲ ರಾಜ್ಯಗಳ ವಿಧಾನಸಭೆ ಮತ್ತು ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ವಿಧಾನಪರಿಷತ್ ಚುನಾವಣೆಗಳು ಒಳಗೊಂಡಿವೆ.
ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತಗಳಂತೆ ಸಮಾನತೆ, ಸಾಮಾಜಿಕ ನ್ಯಾಯ ಎಲ್ಲರಿಗೂ ದೊರೆಯಬೇಕಿದೆ. ತೃತೀಯ ಲಿಂಗಿಗಳು ಅಥವಾ ಲಿಂಗ ಅಲ್ಪಸಂಖ್ಯಾತರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಹಿಂಜರಿಯುವ ಪರಿಸ್ಥಿತಿಯನ್ನು ಸುಧಾರಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಮಾಡುತ್ತಿದೆ.

ತೃತೀಯ ಲಿಂಗಿ ಕಲಾವಿದರ ಅರವಾಣಿ ಆರ್ಟ್ ಪ್ರಾಜೆಕ್ಟ್ ತಂಡ ಶೇಷಾದ್ರಿ ರಸ್ತೆಯ ಮುಖ್ಯಚುನಾವಣಾಧಿಕಾರಿ ಕಚೇರಿಯ ಆವರಣದಲ್ಲಿ 3 ಮಹಡಿಯ ನೂತನ ಕಟ್ಟಡದ ಗೋಡೆಗಳ ಮೇಲೆ ಕಣ್ಮನ ಸೆಳೆಯುವ ಬಣ್ಣದ ಚಿತ್ತಾರ ಮೂಡಿಸಿದೆ. ಮತದಾನದ ಮಹತ್ವ, ಯುವಕರು, ಮಹಿಳೆಯರು ಸೇರಿದಂತೆ ಸಮಾಜದ ಎಲ್ಲರ ಸಹಭಾಗಿತ್ವ ಸಾರುವ ವೈಶಿಷ್ಟ್ಯಪೂರ್ಣ ವರ್ಣಚಿತ್ರಗಳನ್ನು ಚಿತ್ತಾಕರ್ಷಕವಾಗಿ ಮೂಡಿಸಿದ್ದು ಇದೇ ತೃತೀಯ ಲಿಂಗಿ ಕಲಾವಿದರು.

ತೃತೀಯ ಲಿಂಗಿ ಸಮುದಾಯವನ್ನು ಸಶಕ್ತಗೊಳಿಸುವ ಆಶಯದಿಂದ ಹುಟ್ಟಿಕೊಂಡ ಸಂಸ್ಥೆಯೇ ಅರವಾಣಿ ಆರ್ಟ್ ಪ್ರಾಜೆಕ್ಟ್. ತೃತೀಯ ಲಿಂಗಿಗಳ ಕೀಳರಿಮೆ ತೊಡೆದು, ಅಸಮಾನತೆಯನ್ನು ಹೋಗಲಾಡಿಸಿ, ತಮ್ಮ ಕಲಾಪ್ರತಿಭೆಯಿಂದ ಸಮಾಜದಲ್ಲಿ ಆರ್ಥಿಕ ಸಬಲೀಕರಣವನ್ನು ಕಂಡುಕೊಳ್ಳಲು ಸಹಕರಿಸುವ ಈ ಸಂಸ್ಥೆಯ ಕಲಾವಿದರು ಬೆಂಗಳೂರು ಸೇರಿದಂತೆ ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ತಮ್ಮ ಕಲಾಪ್ರತಿಭೆ ಪ್ರದರ್ಶಿಸಿದ್ದಾರೆ. ಇದೀಗ ಮತದಾನದ ಮಹತ್ವ ಸಾರುವ ಕಲಾಕೃತಿಗಳನ್ನು ಬೆಂಗಳೂರಿನ ಮೆಟ್ರೊ ಪಿಲ್ಲರ್ಗಳು, ಸರ್ಕಾರಿ ಕಚೇರಿ ಗೋಡೆಗಳು ಸೇರಿದಂತೆ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಚಿತ್ರಕಲೆ ರಚಿಸಲು ಸದಾವಕಾಶ ನೀಡಲಾಗಿದೆ.

ಇದನ್ನೂಓದಿ: ಪದ್ಮನಾಭನಗರದಲ್ಲಿ ಡಿಕೆ ಸೋದರರ ಪ್ರತಿತಂತ್ರ: ಸುರೇಶ್ ಸ್ಪರ್ಧೆ ಸಾಧ್ಯತೆ ಈಗಲೂ ಜೀವಂತ!