ಬೆಂಗಳೂರು: ವಿಸ್ಟ್ರಾನ್ ಕಂಪನಿಗೆ ಸಂಬಂಧಿಸಿದ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದವರ ಮೇಲೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ನಡೆಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರನ್ನು ಉಸ್ತುವಾರಿ ಮೇಲ್ವಿಚಾರಕರಾಗಿ ನೇಮಿಸಿ ಸರ್ಕಾರ ಆದೇಶಿಸಿದೆ.
ಕೋಲಾರ ಜಿಲ್ಲೆಯ ವಿಸ್ಟ್ರಾನ್ ಕಂಪನಿಯ ಕಾರ್ಮಿಕರು ಪ್ರತಿಭಟನೆ ನಡೆಸಿದಾಗ ಕಂಪನಿಗೆ ಸಂಬಂಧಿಸಿದ ಆಸ್ತಿ - ಪಾಸ್ತಿಗಳ ನಷ್ಟವಾಗಿರುತ್ತದೆ ಎಂದು ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಸರ್ಕಾರಕ್ಕೆ ವಿಶೇಷ ವರದಿ ಸಲ್ಲಿಸಿದ್ದಾರೆ.
ಘಟನೆ ಸಂಬಂಧ 300ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿರುತ್ತಾರೆ ಮತ್ತು ಸೂಕ್ತ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಪಡೆಗಳನ್ನು ಸದರಿ ಕಂಪನಿಯ ಸುತ್ತಮುತ್ತ ನಿಯೋಜಿಸಿದ್ದು, ಕಾನೂನು & ಸುವ್ಯವಸ್ಥೆಯನ್ನು ಸುಧಾರಿಸಲಾಗಿರುತ್ತದೆ ಮತ್ತು ಕಂಪನಿಗೆ ಸಂಬಂಧಿಸಿದ ಆಸ್ತಿ-ಪಾಸ್ತಿಗೆ ನಷ್ಟ ಉಂಟು ಮಾಡಿದವರ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಓದಿ: ವಿಸ್ಟ್ರಾನ್ ಗಲಭೆಯ ತನಿಖೆ ಶೀಘ್ರ ಪೂರ್ಣಗೊಳಿಸಿ: ರಾಜ್ಯಕ್ಕೆ ಕೇಂದ್ರ ಸರ್ಕಾರದ ಸೂಚನೆ
ಈ ಘಟನೆಯ ಬಗ್ಗೆ ಗೃಹ ಸಚಿವರು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಒಳಾಡಳಿತ ಇಲಾಖೆ, ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕಾನೂನು & ಸುವ್ಯವಸ್ಥೆ ಇವರೊಂದಿಗೆ ಸಭೆ ನಡೆಸಿರುತ್ತಾರೆ.
ಈ ಘಟನೆಯು ಅತ್ಯಂತ ಗಂಭೀರ ಸ್ವರೂಪದಾಗಿರುವುದರಿಂದ ಉನ್ನತ ಮಟ್ಟದ ಅಧಿಕಾರಿಯಿಂದ ಸದರಿ ಪ್ರಕರಣಗಳ ಕುರಿತು ಮೇಲ್ವಿಚಾರಣೆಯನ್ನು ನಡೆಸಲು ಮಾನ್ಯ ಗೃಹ ಸಚಿವರು ಆದೇಶಿಸಿರುತ್ತಾರೆ. ಅದರಂತೆ ಹೆಚ್ಚುವರಿ ಮಹಾ ನಿರ್ದೇಶಕರು, ಕಾನೂನು ಮತ್ತು ಸುವ್ಯವಸ್ಥೆ ಇವರನ್ನು ತನಿಖೆಯ ಮೇಲ್ವಿಚಾರಕರಾಗಿ ನೇಮಿಸಿ ಸರ್ಕಾರದ ಆದೇಶ ಹೊರಡಿಸಲಾಗಿದೆ.