ಬೆಂಗಳೂರು: ನಗರದಲ್ಲಿ ಮುಂಗಾರು ಮಳೆ ಸುರಿಯಲು ಇನ್ನೊಂದು ತಿಂಗಳು ಬಾಕಿ ಇದ್ದಂತೆ ಎಚ್ಚೆತ್ತುಕೊಂಡಿರುವ ನಗರ ಸಂಚಾರ ಪೊಲೀಸರು ಬೆಂಗಳೂರಿನಲ್ಲಿ ಮಳೆ ಬಂದಾಗ ಅತಿ ಹೆಚ್ಚು ನೀರು ನಿಲ್ಲುವ ಪ್ರದೇಶಗಳೆಂದು (ವಾಟರ್ ಲಾಗಿಂಗ್) 45 ಸ್ಥಳಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಶಿಫಾರಸು ಮಾಡಿದ್ದಾರೆ.
ಮಳೆ ಬಂದಾಗ ಪ್ರತಿ ಬಾರಿಯೂ ನಗರದ ಪ್ರಮುಖ ಜಂಕ್ಷನ್, ಮುಖ್ಯ ರಸ್ತೆಗಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಸಂಚಾರ ದಟ್ಟಣೆಗೆ ಅಡಚಣೆಯಾಗುತ್ತಿತ್ತು. ಬಿದ್ದ ಮಳೆ ನೀರು ವ್ಯವಸ್ಥಿತವಾಗಿ ಒಳಚರಂಡಿಗೆ ನೇರವಾಗಿ ಹೋಗುವ ವ್ಯವಸ್ಥೆ ಇರದ ಪರಿಣಾಮ ಕೆಲ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ತುಂಬುವುದಲ್ಲದೆ, ಸುತ್ತಮುತ್ತ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತಿತ್ತು. ಇದರಿಂದ ಸಾಕಷ್ಟು ತೊಂದರೆ ಆಗುವುದನ್ನು ಮನಗಂಡ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ.ಹರಿಶೇಖರನ್, ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ವಾಟರ್ ಲಾಗಿಂಗ್ ಆಗುವ ಪ್ರದೇಶಗಳು:
ವಿಲ್ಸನ್ ಗಾರ್ಡನ್ 5, ಕಬ್ಬನ್ ಪಾರ್ಕ್ 7, ಹೈ ಗ್ರೌಂಡ್ಸ್ 9, ಸದಾಶಿವನಗರ 2, ಅಶೋಕ ನಗರ 7, ಹಲಸೂರು ಗೇಟ್, 4, ಜೆಬಿ ನಗರ 5, ಶಿವಾಜಿನಗರ 4, ಪುಲಕೇಶಿ ನಗರ 2, ಹಲಸೂರು 7, ಕೆ.ಆರ್.ಪುರ 9, ಕೆ.ಜಿ.ಹಳ್ಳಿ 2, ಆಡುಗೋಡಿ 3, ಮಡಿವಾಳ 6, ಮೈಕೊ ಲೇಔಟ್ 6, ಎಲೆಕ್ಟ್ರಾನಿಕ್ ಸಿಟಿ 4, ಒಲ್ಡ್ ಏರ್ ಪೋರ್ಟ್ 4, ವೈಟ್ ಪೀಲ್ಡ್ 2, ಹೆಚ್ ಎಸ್ಆರ್ ಲೇಔಟ್ 4, ಉಪ್ಪಾರಪೇಟೆ 2, ಸಿಟಿ ಮಾರ್ಕೆಟ್ 2, ಮಾಗಡಿ ರೋಡ್ 4, ಬ್ಯಾಟರಾಯನಪುರ 1, ಕಾಮಾಕ್ಷಿಪಾಳ್ಯ 4, ಕೆಂಗೇರಿ 1, ಮಲ್ಲೇಶ್ವರ 2, ರಾಜಾಜಿ ನಗರ 1, ಯಶವಂತಪುರ 3, ಪೀಣ್ಯ 1, ಜಾಲಹಳ್ಳಿ 1, ವಿವಿಪುರಂ 6, ಬಸವನಗುಡಿ 7, ಬನಶಂಕರಿ 4 ಕಡೆಗಳಲ್ಲಿ ಮಳೆ ನೀರು ತೆರವು ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ.
1. ನಗರದಲ್ಲಿ 221 ಕಡೆಗಳಲ್ಲಿ ಪಾದಚಾರಿ ಮಾರ್ಗಗಳು, 86 ಸ್ಕೈವಾಕ್ ಹಾಗೂ ಮೇಲುಸೇತುವೆಗಳು ನಿರ್ಮಿಸಬೇಕು.
2. 34 ಪಾದಚಾರಿ ಸುರಂಗ ಮಾರ್ಗ, 213 ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ, 478 ಭಾಗಗಳಲ್ಲಿ ಜಂಕ್ಷನ್ ಅಭಿವೃದ್ಧಿಗೊಳಿಸುವುದು.
3. ಮುಖ್ಯರಸ್ತೆ ಹೊಂದಿಕೊಂಡಂತಿರುವ ಗುರುತಿಸಲಾಗಿರುವ 292 ಜಾಗಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು.
4. ಅಪಾಯಕ್ಕೆ ಎಡೆ ಮಾಡುವ ಅನಗತ್ಯ ಕಡೆಗಳಲ್ಲಿರುವ 97 ವಿದ್ಯುತ್ ಕಂಬ ಹಾಗೂ 76 ವಿದ್ಯುತ್ ಪರಿವರ್ತಕ (ಟ್ರಾನ್ಸ್ ಫಾರ್ಮರ್) ಸ್ಥಳಾಂತರಿಸುವುದು.
5. ಅತಿ ಹೆಚ್ಚು ಅಪಘಾತ ವಲಯ ಎಂದು ಕರೆಯಲಾಗುವ 47 ಸ್ಥಳಗಳಲ್ಲಿ ನಿಗಾವಹಿಸಿ ಅಪಘಾತ ಆಗದಂತೆ ನಿಯಂತ್ರಣ, ನಗರದಲ್ಲಿ 105 ವಿದ್ಯುತ್ ಕಂಬಗಳನ್ನು ಅಳವಡಿಸುವುದು.
6. ಅನಗತ್ಯ ಇರುವ 9 ಬಸ್ ವೇಗಳ ಸ್ಥಳಾಂತರ ಹಾಗೂ 27 ಜಾಗಗಳಲ್ಲಿ ಬಸ್ ವೇಗಳನ್ನು ನಿರ್ಮಿಸುವುದು.
7. ನಗರದ 227 ಜಾಗಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 131 ಹಂಪ್ಸ್ಗಳ ವೈಜ್ಞಾನಿಕವಾಗಿ ನಿರ್ಮಾಣ.
8. ಅತಿ ಹೆಚ್ಚು ಕಸ ಹರಡಿರುವ 52 ಪ್ರದೇಶಗಳಲ್ಲಿ ಕಸ ಸ್ಚಚ್ಛಗೊಳಿಸುವುದು ಸೇರಿದಂತೆ ಮುಂಗಾರು ಆಗಮನ ಮುನ್ನವೇ ಮೇಲಿನ ಅಂಶಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಹಾಗೂ ಸಂಬಂಧಪಟ್ಟ ಇಲಾಖೆಗೆಗಳಿಗೆ ಹರಿಶೇಖರನ್ ಮನವಿ ಮಾಡಿದ್ದಾರೆ.