ಬೆಂಗಳೂರು: ವೇದಿಕೆ ಮೇಲೆ ಕಾಣಿಸಿಕೊಳ್ಳದ, ಕಾರ್ಯಕರ್ತರ ನಡುವೆ ಕಾರ್ಯಕರ್ತರಾಗಿ ಬೆಳೆದ, ಪಕ್ಷಕ್ಕೋಸ್ಕರ ಜೀವನವನ್ನು ಮುಡುಪಾಗಿಟ್ಟ ವ್ಯಕ್ತಿ ಡಾ.ನಾರಾಯಣ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾದ ಡಾ. ನಾರಾಯಣ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಿ ಫಾರಂ ನೀಡಿದರು. ಮಲ್ಲೇಶ್ವರಂನಲ್ಲಿರವ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಸ್ವೀಕರಿಸಿದ ಅಭ್ಯರ್ಥಿ ಪಕ್ಷದ ಸಂಪ್ರದಾಯದಂತೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಬಿ ಫಾರಂ ವಿತರಿಸಿ ಮಾತನಾಡಿದ ಕಟೀಲ್, ನಾರಾಯಣ ಅವರ ಹೆಸರನ್ನು ಉಪಚುನಾವಣೆಗೆ ರಾಜ್ಯದ ಕೋರಿಕೆಯ ಮೇರೆಗೆ ನಮ್ಮ ರಾಷ್ಟ್ರೀಯ ನಾಯಕರು ಘೋಷಣೆ ಮಾಡಿದ್ದಾರೆ. ನಾರಾಯಣ್ ಅವರು ಮೂಲತಃ ಮಂಗಳೂರಿನವರು, 40 ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ತನ್ನದೇ ಆದ ಸ್ವಂತ ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡು ಬದುಕನ್ನು ನಡೆಸುತ್ತಿದ್ದಾರೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟ ಮಾಡಿ, ಕಹಳೆ ಪತ್ರಿಕೆಯನ್ನು ತಂದ ಕಾರಣಕ್ಕೆ ಬಹಳಷ್ಟು ಕಷ್ಟ ಅನುಭವಿಸಬೇಕಾಗಿ ಬಂತು. ಸಂಘಟನೆಯ ಜತೆಗೆ ಸಂಘಟನೆಯ ಎಲ್ಲ ಕಾರ್ಯವನ್ನು ನೋಡಿಕೊಂಡವರು, ಕಷ್ಟದಲ್ಲಿರುವಾಗ ನಮ್ಮ ಸಂಘಟನೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ್ದರು. ನಮ್ಮದು ಪರಿವಾರ ಸಂಘಟನೆ, ನಮ್ಮ ಎಲ್ಲಾ ಪರಿವಾರದ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. ಸಂಘದಿಂದ ಬೆಳೆದು ಪರಿವಾರದ ಸಂಸ್ಕೃತಿಯ ಬಿಜೆಪಿ ಜತೆಗೆ ಸೇರಿಕೊಂಡರು. ದಿಗಂತ ಮುದ್ರಣದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಯಡಿಯೂರಪ್ಪ ಅವರ ಜತೆ ಜೊತೆಗೆ ಪಕ್ಷ ಸಂಘಟನೆಗೆ ಸಹಕಾರಿಯಾಗಿ ನಿಂತವರು. ಅಂತಹವರನ್ನು ಗುರುತಿಸಿ ನಮ್ಮ ಪಕ್ಷ ಜವಾಬ್ದಾರಿಯನ್ನು ಕೊಟ್ಟಿದೆ ಎಂದರು.
ಅವರು ಎಲ್ಲಿಯೂ ವೇದಿಕೆ ಮೇಲೆ ಬಂದು ಕೆಲಸ ಮಾಡಿದವರಲ್ಲ. ಕಾರ್ಯಕರ್ತರಾಗಿ ಕಾರ್ಯಕರ್ತರ ಮಧ್ಯದಲ್ಲಿ ಕೆಲಸ ಮಾಡಿದವರು ಹಾಗಾಗಿ ಕಾರ್ಯಕರ್ತರಲ್ಲಿ ವಿಶ್ವಾಸ ಹೆಚ್ಚಾಗಲಿದೆ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿ ಉನ್ನತ ಮಟ್ಟಕ್ಕೆ ಏರಬಹುದು ಎನ್ನುವುದಕ್ಕೆ ನಾರಾಯಣ ಅವರೇ ಉದಾಹರಣೆ. ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ಕೇಂದ್ರ ನಾಯಕರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.