ಬೆಂಗಳೂರು: ಮತ್ತಿಬ್ಬರು ಶಾಸಕರ ರಾಜೀನಾಮೆಯಿಂದ ಗೊಂದಲಕ್ಕೀಡಾಗಿರುವ ಕಾಂಗ್ರೆಸ್ ನಾಯಕರು ಮುಂದೇನು? ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ಕುರಿತು ಚರ್ಚಿಸಲು ಕುಮಾರ ಕೃಪಾ ಅತಿಥಿ ಗೃಹದತ್ತ ನಾಯಕರು ಆಗಮಿಸುತ್ತಿದ್ದು, ನಿರಂತರ ಸಭೆಗಳು ನಡೆಯುತ್ತಿವೆ.
ಸದ್ಯ ಗುಲಾಂನಬಿ ಆಜಾದ್ ಮಾತ್ರ ಕೆಕೆ ಗೆಸ್ಟ್ ಹೌಸ್ನಲ್ಲಿದ್ದು ಅವರ ಭೇಟಿಗೆ ರಾಜ್ಯ ಕಾಂಗ್ರೆಸ್ ನಾಯಕರುಗಳು ಆಗಮಿಸುತ್ತಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಯುಟಿ ಖಾದರ್, ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ, ವಿ.ಎಸ್. ಉಗ್ರಪ್ಪ, ಸಚಿವ ಆರ್.ವಿ. ದೇಶಪಾಂಡೆ, ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಆಗಮಿಸಿದ್ದು, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಆಗಮಿಸುತ್ತಿದ್ದಂತೆ ಇನ್ನೊಂದು ಸುತ್ತು ಸಭೆ ನಡೆಸಲಿದ್ದಾರೆ.
ಮೈತ್ರಿ ಸರಕಾರಕ್ಕೆ ನಿಜವಾಗಿಯೂ ದೊಡ್ಡ ಮಟ್ಟದ ಗಂಡಾಂತರವೇ ಎದುರಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ಅವಕಾಶ ಕೂಡ ಕ್ಷೀಣಿಸಿದೆ. ಒಟ್ಟಾರೆ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ಕಳೆದ ಮೂರುದಿನಗಳಿಂದ ನಡೆಸಿದ ಪ್ರಯತ್ನ ಇಂದು ಬಹುತೇಕ ವಿಫಲಗೊಂಡಿದ್ದು, ಇನ್ನಷ್ಟು ದಿನ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ಪ್ರಯೋಜನವಿಲ್ಲ ಎಂಬ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ.