ಬೆಂಗಳೂರು: ಕಾಂಗ್ರೆಸ್ ಸೇರಿದಂತೆ ಪ್ರತಿ ಪಕ್ಷಗಳು ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಮಷಿನ್ಗಳ ಬಗ್ಗೆ ಹೊಗಳಿ, ಸೋತಾಗ ಸಂಶಯ ವ್ಯಕ್ತಪಡಿಸುತ್ತವೆ. ಇಂತಹ ದ್ವೀಮುಖ ನೀತಿ, ನಡವಳಿಕೆಯನ್ನು ಬಿಜೆಪಿ ಖಂಡನಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಯಂತ್ರಗಳ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಜಿ.ಪರಮೇಶ್ವರ್ ಹಾಗೂ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ರಾಷ್ಟ್ರೀಯ ಹಾಗೂ ರಾಜ್ಯದ ಅನೇಕ ನಾಯಕರು ಸಂಶಯ ವ್ಯಕ್ತಪಡಿಸುತ್ತಿರುವುದು ತೀವ್ರ ಖಂಡನೀಯ.
ಕಾಂಗ್ರೆಸ್ ಸೇರಿದಂತೆ ಅನೇಕ ಪ್ರತಿ ಪಕ್ಷಗಳನ್ನು ಈಗಾಗಲೇ ದೇಶದ ಜನತೆ ತಿರಸ್ಕರಿಸಿದ್ದಾರೆ. ವಿನಾಕಾರಣ ಮತಯಂತ್ರಗಳನ್ನು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿರುವುದು ನಾಚಿಕೇಗೇಡಿನ ಸಂಗತಿ. ಇದು ಅವರ ಅಸಹಾಯಕತೆ ಮತ್ತು ಹತಾಶೆ ಭಾವನೆ ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.
ಕೇಂದ್ರ ಚುನಾವಣಾ ಆಯೋಗ ಹಲವಾರು ಭಾರಿ ಎಲ್ಲಾ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿ ವಿ.ವಿ. ಪ್ಯಾಟ್ ಸೇರಿದಂತೆ ಮತ ಯಂತ್ರಗಳ ಬಗ್ಗೆ ಇರುವ ಸಂಶಯ, ದೂರುಗಳನ್ನು ನಿವಾರಣೆ ಮಾಡಿತ್ತು. ಇಷ್ಟಾದರೂ ಈಗ ಮತ್ತೇ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದರು.
ಕೆಲ ತಿಂಗಳುಗಳ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ 5 ರಾಜ್ಯಗಳ ವಿಧಾನಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿತ್ತು. ಕೈ ನೇತೃತ್ವದ ಸರ್ಕಾರ ಕೆಲವು ಕಡೆ ಈಗಾಗಲೇ ರಚನೆಯಾಗಿದೆ. ಆಗ ಕೂಡ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಇತ್ತು. ಆಗ ಏಕೆ ಕಾಂಗ್ರೆಸ್ ಪಕ್ಷದ ನಾಯಕರು ಮತಯಂತ್ರಗಳ ಬಗ್ಗೆ ಏಕೆ ಸಂಶಯ ವ್ಯಕ್ತಪಡಿಸಲಿಲ್ಲ. ಅದರ ಬಗ್ಗೆ ಮಾತನಾಡಲಿಲ್ಲ. ಈಗ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿ ಪಕ್ಷಗಳು ಹಾಗೂ ಆ ನಾಯಕರು ತಮ್ಮ ವೈಫಲ್ಯಗಳನ್ನು, ಮುಚ್ಚಿಕೊಳ್ಳಲು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.