ಬೆಂಗಳೂರು: ನಗರದಲ್ಲಿ ಕಸದಿಂದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಆರಂಭಿಸಲು ಸಂಸ್ಥೆಗಳು ಹಣಕಾಸಿನ ತೊಡಕು ಎದುರಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಈ ಯೋಜನೆಗಳಿಗೆ, ಹಿಂದೆ ಸೋಲಾರ್ ಪವರ್ ಯೋಜನೆಗೆ ನೀಡಿದ ಉತ್ತೇಜನದ ರೀತಿಯಲ್ಲೇ ನೆರವು ನೀಡುವುದು ಅಗತ್ಯ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೇವಲ ಬೆಂಗಳೂರಿಗೆ ಅಲ್ಲದೆ, ಇಡೀ ರಾಷ್ಟ್ರದ ದೊಡ್ಡ ದೊಡ್ಡ ನಗರಕ್ಕೆ ಇದನ್ನು ಅನುಷ್ಠಾನ ಮಾಡಲು ಬೇಕಾದ ಅನುದಾನದ ಅಗತ್ಯವಿದೆ ಎಂದ ಅವರು, ಘನತ್ಯಾಜ್ಯ ವೆಚ್ಚದ ನಿರ್ವಹಣೆಗೆ ಹೊಸ ಯೋಜನೆಗಳು ಬೇಕಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂಬ ಭರವಸೆ ಇದೆ. ಬೆಂಗಳೂರಿನಲ್ಲಿ ಆರು ಯೋಜನೆಗಳು ಅನುಷ್ಠಾನದ ಹಂತದಲ್ಲಿದ್ದರೂ, ಕೆಲವೊಂದು ಆರ್ಥಿಕ ತೊಡಕು, ಸುಂಕದ ನೀತಿಗಳಲ್ಲಿ ಬದಲಾವಣೆ ತರಲು ಟೆಂಡರ್ ಪಡೆದ ಸಂಸ್ಥೆಗಳು ಬಯಸುತ್ತಿವೆ ಎಂದರು.
ಬೃಹತ್ ಮೆಟ್ರೋ ಪಾಲಿಟನ್ ನಗರವಾದ ಬೆಂಗಳೂರಿನಲ್ಲಿ ಜನರಿಗೆ ಬೇಕಾದ ಮೂಲ ಸೌಕರ್ಯ ನೀಡಲು, ಮೇಲ್ಸೇತುವೆ, ಹೈವೇ, ಸಬ್ ಅರ್ಬನ್ ರೈಲು, ಮೆಟ್ರೋ ಕಾಮಗಾರಿಗಳಿಗೆ ಕೇಂದ್ರದ ನೆರವಿನ ಅಗತ್ಯವಿದೆ. ಹಾಗಾಗಿ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನವನ್ನು ಈ ಯೋಜನೆಗಳಿಗೆ ಮೀಸಲಿಡುವ ನಿರೀಕ್ಷೆ ಇದೆ. ಅಲ್ಲದೆ ಕೆರೆಗಳ ಸಂರಕ್ಷಣೆ, ಹಾಗೂ ನೀರಿನ ಸೌಲಭ್ಯಕ್ಕೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇದೆ ಎಂದರು.