ಬೆಂಗಳೂರು: ಇಂದಿರಾನಗರದಲ್ಲಿ ಪಬ್ ಮತ್ತು ಬಾರ್ಗಳಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯದ ವಿರುದ್ಧ ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದರ ಕುರಿತು ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ವಿವಿಧ ಸಂಘನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಸಲಾಯಿತು.
ಅರ್ಜಿದಾರರ ಪರ ವಾದಿಸಿದ ಎಸ್.ಆರ್. ತೇಜಸ್ ಅವರು, ಇಂದಿರಾನಗರದಲ್ಲಿರುವ ಪಬ್ ಮತ್ತು ಬಾರ್ಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಹಲವು ಬಾರಿ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರೂ ಪೊಲೀಸ್ ಇಲಾಖೆಯು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ, ಜನ ವಸತಿ ಪ್ರದೇಶಗಳಲ್ಲಿ ಪಬ್ ಮತ್ತು ಬಾರ್ಗಳಿಗೆ ಲೈಸೆನ್ಸ್ ನೀಡಿರುವುದೇ ಕಾನೂನು ಬಾಹಿರವೆಂದು ಪೀಠಕ್ಕೆ ವಿವರಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಜನನಿಬಿಡ ಪ್ರದೇಶದಲ್ಲಿ ಯಾವ ಆಧಾರದ ಮೇಲೆ ಪಬ್ ಮತ್ತು ಬಾರ್ಗಳಿಗೆ ಲೈಸೆನ್ಸ್ ನೀಡಲಾಗಿದೆ. ಸ್ಥಳೀಯ ಸಂಘಟನೆಗಳು ಶಬ್ದ ಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದ್ದಾರೆ. ನೀವು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂಬುದರ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ.