ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಮುನಿರತ್ನ ಪರ ಬಿಜೆಪಿ ನಾಯಕರು ಅಬ್ಬರದ ಪ್ರಚಾರ ನಡೆಸಿದರು. ರೋಡ್ ಶೋ, ಬೈಕ್ ರ್ಯಾಲಿ ನಡೆಸುವ ಮೂಲಕ ಮತಯಾಚನೆ ಮಾಡಿದರು.
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಜ್ಞಾನಜ್ಯೋತಿ ನಗರ, ಕೆಗ್ಗುಂಟೆ, ಭೈರವೇಶ್ವರ ನಗರ, ಉಲ್ಲಾಳ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ತೆರೆದ ವಾಹನದಲ್ಲಿ ಸಚಿವರಾದ ಆರ್. ಅಶೋಕ್, ಡಾ.ನಾರಾಯಣಗೌಡ, ಎಸ್ ಟಿ ಸೋಮಶೇಖರ್ ಜೊತೆಯಲ್ಲಿ ಪ್ರಚಾರ ನಡೆಸಿ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಿದರು. ಕ್ಷೇತ್ರದ ಯುವಕರನ್ನು ಟಾರ್ಗೆಟ್ ಮಾಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರಿಂದ ರೋಡ್ ಶೋ ನಡೆಸಲಾಯಿತು.
ಪೊಲೀಸ್ ಬಿಗಿ ಭದ್ರತೆ: ಪಶ್ಚಿಮ ಬಂಗಾಳ ಘಟನೆಯ ನಂತರ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯಗೆ ಭದ್ರತೆ ಕಲ್ಪಿಸಿದ್ದು, ರ್ಯಾಲಿ ಹಾಗೂ ಪ್ರಚಾರ ಕಾರ್ಯಕ್ರಮದ ಉದ್ದಕ್ಕೂ ವಿಶೇಷ ಪಡೆಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.
ನಿಯಮ ಉಲ್ಲಂಘನೆ: ಬೈಕ್ ರ್ಯಾಲಿ ವೇಳೆ ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಸಂಚಾರ ನಿಯಮ ಉಲ್ಲಂಘನೆ ಮಾಡಿದರು. ಇದರ ಮಧ್ಯೆ ಪ್ರಚಾರದ ವೇಳೆಯಲ್ಲಿ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಮಾಡಲಾಗಿತ್ತು.