ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮತ್ತೊಮ್ಮೆ ಮೂನ್ಸೂಚನೆ ನೀಡಿದೆ. ಹಾಸನ, ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 31ರಂದು, ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರಿನಲ್ಲಿ ಹಾಗು ಜೂ 1 ರಂದು ಬಿರುಸಾಗಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇನ್ನು ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮೈಸೂರು, ಶಿವಮೊಗ್ಗ ಮತ್ತು ವಿಜಯನಗರದಲ್ಲಿ ಮುಂದಿನ 3 ದಿನ ಹಗುರದಿಂದ ಕೂಡಿದ ಸಾಧಾರಣ ಮಳೆ ಸುರಿಯಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಸೋಮವಾರ ಬೆಂಗಳೂರು ನಗರ, ರಾಮನಗರ, ಹಾವೇರಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇವತ್ತೇ ಅಲ್ಲಲ್ಲಿ ಜೋರಾಗಿ ಮಳೆ ಸುರಿದಿದೆ.

ಈ ಬಾರಿ ನೈಋತ್ಯ ಮುಂಗಾರು ಲೇಟ್: ನೈಋತ್ಯ ಮಾನ್ಸೂನ್ ಜೂ 6 ಅಥವಾ ಜೂ 7ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ಹೇಳಿದೆ. ವಾಡಿಕೆಯಂತೆ ಜೂ 1 ಅಥವಾ ಜೂ 2ರಂದು ಕೇರಳಕ್ಕೆ ಆಗಮಿಸಲಿರುವ ಮಾರುತಗಳು ಮೂರ್ನಾಲ್ಕು ದಿನಗಳ ಬಳಿಕ ಕರ್ನಾಟಕಕ್ಕೆ ಪ್ರವೇಶಿಸಬೇಕಿತ್ತು. ಆದರೆ ಈ ಬಾರಿ ಉಂಟಾಗಿರುವ ತೇವಾಂಶ ಕೊರತೆ, ಕಡಿಮೆ ಗಾಳಿ, ಗಾಳಿ ಬೀಸುವ ವೇಗ ಇಲ್ಲದಿರುವುದು ಹಾಗು ಮೋಕಾ ಚಂಡಮಾರುತದಿಂದ ತೇವಾಂಶ ಭರಿತ ಮೋಡಗಳ ಸೆಳೆತ ಸೇರಿದಂತೆ ಇತರ ಕಾರಣಗಳಿಂದ ವಾಡಿಕೆಯಂತೆ ಆಗಮಿಸಬೇಕಿದ್ದ ಮೇಳೆ ಈ ಸಲ ಮುಂಗಾರು ಮಾರುತಗಳ ಮೇಲೆ ಪರಿಣಾಮ ಬೀರಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸೋಮವಾರ ಬಂಗಾಳಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಮುಂಗಾರು ಸಂಬಂಧ ಪೂರಕ ಹವಾಗುಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜೂ 4 ಅಥವಾ 5ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಾರುತಗಳು ಪ್ರಬಲವಾದರೆ ಒಂದೆರೆಡು ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಆಗಮಿಸುವ ಸಾಧ್ಯತೆಗಳಿವೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತುಮಕೂರು: ಬಿರುಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಗೆ ಅಪಾರ ನಷ್ಟ