ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿನ ಸಿಎ/ ಅಮೆನಿಟಿ ನಿವೇಶನಗಳ ಹಂಚಿಕೆಗೆ ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಇದುವರೆಗೆ 99 ವರ್ಷಗಳ ಲೀಸ್ ಆಧಾರದಲ್ಲಿ ಹಂಚುತ್ತಿದ್ದ ನಿವೇಶನಗಳನ್ನು ಈಗ ಏಕಾಏಕಿ 10 ವರ್ಷಗಳ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮಾಡಲು ಅವಕಾಶ ನೀಡಲಾಗಿದೆ.
ಇದುವರೆಗೆ 99 ವರ್ಷಗಳಿಗೆ ಲೀಸ್ ನೀಡಿ ಈ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಲೀಸ್ ಅವಧಿ ಮುಗಿದ ಬಳಿಕವೂ ಹಂಚಿಕೆದಾರರಿಗೆ ಈ ನಿವೇಶನಗಳನ್ನು ಮಾರಾಟ ಮಾಡುವ ಅವಕಾಶವಿರಲಿಲ್ಲ. ಆದರೆ, ಈಗ ಕೇವಲ 10 ವರ್ಷಗಳಿಗೆ ಈ ನಿವೇಶನಗಳನ್ನು ನೀಡುವುದರ ಜೊತೆಗೆ ಲೀಸ್ ಅವಧಿ ಮುಗಿದ ಬಳಿಕ ಮಾರಾಟ ಮಾಡಲು ಅವಕಾಶ ಸಿಕ್ಕಿದೆ.
ಕೈಗಾರಿಕಾ ಪ್ರದೇಶಗಳಲ್ಲಿ ನಿಯಮಾನುಸಾರ ಒದಗಿಸಬೇಕಾದ ಚಟುವಟಿಕೆಗಳು, ಮೂಲ ಸೌಕರ್ಯಗಳಿಗಾಗಿ ಸಿಎ/ ಅಮೆನಿಟಿ ನಿವೇಶನಗಳನ್ನು ಮೀಸಲಿಡಬೇಕು. ಮೀಸಲಿಟ್ಟ ನಿವೇಶನಗಳನ್ನು ಸ್ಥಳ, ಉದ್ದೇಶ ಸಹಿತ ಜಾಹೀರಾತು ನೀಡಿ ನಿವೇಶನಗಳ ಹಂಚಿಕೆಗೆ ಅರ್ಜಿ ಸ್ವೀಕರಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಕೆಐಎಡಿಬಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಕಾರ್ಯಕಾರಿ ಸದಸ್ಯರ ಅಧ್ಯಕ್ಷತೆಯಲ್ಲಿ ಮಂಡಳಿ ಅಧಿಕಾರಿಗಳೊಂದಿಗೆ ಉಪ ಸಮಿತಿ ರಚಿಸಿ ಮಾನದಂಡಗಳ ಅನುಸಾರ ಅರ್ಜಿ ಪರಿಶೀಲಿಸಿ ರಾಜ್ಯಮಟ್ಟದ ಏಕ ಗವಾಕ್ಷಿ ತೆರವು ಸಮಿತಿ ಸಭೆಯ ಮುಂದೆ ಚರ್ಚಿಸಿ ಅನುಮೋದನೆ ಪಡೆಯಬೇಕು. ಅನುಮೋದನೆ ದೊರೆತವರಿಗೆ 10 ವರ್ಷಗಳ ಕಾಲ ಲೀಸ್ ಕಂ ಸೇಲ್ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡಬೇಕು. ನಂತರ ಈ ನಿವೇಶನಗಳನ್ನು ಹಂಚಿಕೆದಾರರಿಗೆ ಶುದ್ಧ ಕ್ರಯ ಮಾಡಿಕೊಡಬೇಕು ಎಂದು ಸರ್ಕಾರ ಆದೇಶಿಸಿದೆ.
ಹಿಂದೆ ಇದ್ದ ನಿಯಮವೇನು? : ಹಾಲಿ ಕೆಐಎಡಿಬಿಯಲ್ಲಿ ಸಿಎ ನಿವೇಶನಗಳ ಹಂಚಿಕೆಯ ಸಂಪೂರ್ಣ ಮೊತ್ತವನ್ನು ಪಾವತಿಸಿಕೊಳ್ಳುತ್ತಿದ್ದರೂ ಸಹ ಹಂಚಿಕೆದಾರರಿಗೆ 99 ವರ್ಷಗಳ ಲೀಸ್ ಆಧಾರದ ಮೇಲೆ ನೀಡಲಾಗುತ್ತಿತ್ತು. ಆದರೆ, ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಸಿ ಎ ನಿವೇಶನಕ್ಕೆ ಹಂಚಿಕೆಯ ಶೇಕಡಾ 10ರಷ್ಟು ಮೊತ್ತವನ್ನು ಮಾತ್ರ ಪಡೆದು 30 ವರ್ಷಗಳ ಲೀಸ್ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿತ್ತು.