ಬೆಂಗಳೂರು: ಸೇವಾ ಕಾರ್ಯಗಳು, ಸಂಘಟನೆ ಬಲವರ್ಧನೆ ಉದ್ದೇಶಿತ ಕಾರ್ಯ ಯೋಜನೆ ಅನುಷ್ಠಾನ ಸೇರಿ ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಕು ಎದುರಾದರೆ, ಯಾವುದೇ ಹಿಂಜರಿಕೆ ಮಾಡದೆ ಗಮನಕ್ಕೆ ತನ್ನಿ ಎಂದು ಜಿಲ್ಲಾ ಘಟಕಗಳಿಗೆ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರ್ ಸೂಚನೆ ನೀಡಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ 'ಜಗನ್ನಾಥ ಭವನ'ದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಅವರು ಇಂದು ಜಿಲ್ಲಾ ಬಿಜೆಪಿ ಘಟಕಗಳ ಅಧ್ಯಕ್ಷರ ಜೊತೆ ಪರಿಚಯಾತ್ಮಕ ಸಭೆಯ ರೀತಿ ಮೊದಲ ಬೈಠಕ್ ನಡೆಸಿದರು.
ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ, ಚುನಾವಣಾ ತಯಾರಿ, ಯೋಜನೆಗಳ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚೆ ನಡೆದಿದ್ದು, ಜಿಲ್ಲಾ ಘಟಕಗಳ ಕಾರ್ಯಚಟುವಟಿಕೆಗಳಿಗೆ ಚುರುಕು ಮುಟ್ಟಿಸಲು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಕುಂತೂರ್, ನಿರಂತರ ಸಂವಹನ, ಸಂಪರ್ಕ ಹಾಗೂ ಮುಕ್ತ ಮಾತುಕತೆಯು ಸಂಘಟನೆಗೆ ಹಿತ ಮತ್ತು ಕಾರ್ಯ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಜವಾಬ್ದಾರಿ ನಿರ್ವಹಣೆಯಲ್ಲಿ ತೊಡಕು ಎದುರಾದರೆ ಗಮನಕ್ಕೆ ತರಲು ಹಿಂಜರಿಕೆ ಬೇಡ. ಪರಸ್ಪರ ಚರ್ಚೆಯ ಮೂಲಕ ತ್ವರಿತವಾಗಿ ಬಗೆಹರಿಸಲು ಸಾಧ್ಯವಿದೆ ಎಂಬ ವಿಶ್ವಾಸ ತುಂಬಿದರು ಎಂದು ತಿಳಿದುಬಂದಿದೆ.
ಸಭೆಯಲ್ಲಿ ನಿರ್ಗಮಿತ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ಕುಮಾರ್, ರಾಜ್ಯ ಪದಾಧಿಕಾರಿಗಳು, ಪ್ರಮುಖರು, ಜಿಲ್ಲಾ ಘಟಕದ ಅಧ್ಯಕ್ಷರು, ವಿವಿಧ ಮೋರ್ಚಾಗಳ ಪ್ರಮುಖರು ಹಾಜರಿದ್ದರು.
ಇದನ್ನೂ ಓದಿ: ರಾಜ್ಯದಲ್ಲಿ ಮ್ಯಾಜಿಕ್ ನಂಬರ್ ದಕ್ಕಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾರ್ಯತಂತ್ರವೇನು?