ಬೆಂಗಳೂರು: ಗೇಮಿಂಗ್ ಆ್ಯಪ್ ಸೇರಿದಂತೆ ಸರ್ಕಾರಿ ಇಲಾಖೆ ವೆಬ್ ಸೈಟ್ ಹ್ಯಾಕ್ ಮಾಡುತ್ತಿದ್ದ ಆರೋಪಿ ಶ್ರೀಕೃಷ್ಣ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಗಳ ಡೇಟಾ ಕದ್ದು ಮಾಲೀಕರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ ವಿಚಾರ ಬಯಲಾಗಿದೆ.
ಸಾಫ್ಟ್ವೇರ್ ಕಂಪನಿಗಳು ಮತ್ತು ಗೇಮಿಂಗ್ ಕಂಪನಿಗಳ ಸರ್ವರ್ ಹ್ಯಾಕ್ ಮಾಡುತ್ತಿದ್ದ ಶ್ರೀಕೃಷ್ಣ, ಕಂಪನಿ ಮಾಲೀಕನಿಗೆ ನೇರವಾಗಿ ಇ ಮೇಲ್ ಮಾಡುತ್ತಿದ್ದ. ಕಂಪನಿಯ ಖಾಸಗಿ ಡೇಟಾ ಕಳ್ಳತನ ಮಾಡಿರುವ ಬಗ್ಗೆ ತಿಳಿಸಿ ಹಣ ನೀಡುವಂತೆ ಬ್ಲಾಕ್ ಮಾಡುತ್ತಿದ್ದನಂತೆ. ಬಹುರಾಷ್ಟ್ರೀಯ ಕಂಪನಿಗಳಿಗೆ ದತ್ತಾಂಶವೇ ಪ್ರಮುಖ ಸಂಪತ್ತು. ಡೇಟಾ ಹ್ಯಾಕ್ ಮಾಡಿದ ಹ್ಯಾಕರ್ನೊಂದಿಗೆ ಮಾತುಕತೆ ನಡೆಸಿ ಕೇಳಿದಷ್ಟು ಹಣ ನೀಡುತ್ತಿದ್ದವು. ಆದರೆ, ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡುತ್ತಿರಲಿಲ್ಲ. ಯಾಕಂದರೆ ದೂರು ನೀಡಿದರೆ ಪ್ರತಿಷ್ಠಿತ ಕಂಪನಿಯ ಡೇಟಾ ಕಳ್ಳತನ ಆಗಿರುವುದು ಬಯಲಾಗುತಿತ್ತು.
ಡೇಟಾ ಕಳ್ಳತನ ಆಗಿದೆ ಎಂದರೆ ಆ ಕಂಪನಿಯೇ ಸೇಫ್ ಇಲ್ಲ ಎಂದರ್ಥವಾಗುತ್ತೆ. ಇದರಿಂದ ಉದ್ಯಮದಲ್ಲಿ ಭಾರಿ ಹೊಡೆತ ಬೀಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದು ಸಾಫ್ಟ್ವೇರ್ ಕಂಪನಿ ಡೇಟಾ ಕಳ್ಳತನ ಬಗ್ಗೆ ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಆರೋಪಿ ಕೃಷ್ಣ ಕೋಟಿ ಕೋಟಿ ಲೂಟಿ ಹೊಡೆದಿದ್ದನಂತೆ.
ಅಕ್ರಮವಾಗಿ ಸಂಪಾದನೆ ಮಾಡುತ್ತಿದ್ದ ಹಣವನ್ನು ಇದೇ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುನೀಲ್ ಹೆಗ್ಡೆ ಕಡೆಯಿಂದ ಬೆಂಗಳೂರಿನ ಹಲವು ವ್ಯವಹಾರದಲ್ಲಿ ಹೂಡಿಕೆ ಮಾಡುತ್ತಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಆರೋಪಿ ಕೃಷ್ಣ ಹಾಗೂ ಸುನಿಶ್ ಡಿಜಿಟಲ್ ರೂಪದಲ್ಲಿ ಇರುತ್ತಿದ್ದ ಹಣವನ್ನು ಕ್ಯಾಶ್ ಮಾಡಿಕೊಳ್ಳಲು ವಿದೇಶಿ ಹಣ ವಿನಿಮಯ ಮಾಡುವವರು ಮತ್ತು ಹಣವನ್ನು ವಿದೇಶದಲ್ಲಿ ಬಂಡವಾಳ ಹೂಡುವವರನ್ನು ಹುಡುಕಿ ಸಂಪರ್ಕ ಸಾಧಿಸುತ್ತಿದ್ದರಂತೆ. ನಗದು ಕೊಟ್ಟರೆ ಅಕೌಂಟ್ಗೆ ಹಣ ಹಾಕುವುದಾಗಿ ಡೀಲ್ ಮಾಡಿಕೊಳ್ಳುತಿದ್ದರಂತೆ. ವೈಟ್ ಮನಿ ಕೊಡುವುದಾಗಿ ಹೇಳಿ ಕ್ಯಾಶ್ ಪಡೆಯುತ್ತಿದ್ದರು. ಕ್ಯಾಶ್ ಪಡೆದ ನಂತರ ಕೃಷ್ಣ ಹ್ಯಾಕ್ ಮಾಡಿ ಗಳಿಸಿದ್ದ ಹಣವನ್ನ, ವಿವಿಧ ಫೇಕ್ ಅಕೌಂಟ್ ನಲ್ಲಿ ಇದ್ದ ಡಿಜಿಟಲ್ ಮನಿ ವರ್ಗಾವಣೆ ಮಾಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಸಿಸಿಬಿಗೆ ಸಿಕ್ಕಿದೆ ಎನ್ನಲಾಗಿದೆ.
ವಿದೇಶದಿಂದ ಅಂಚೆ ಕಚೇರಿ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಹತ್ತು ಮಂದಿ ಆರೋಪಿಗಳನ್ನು ಈಗ ಬಂಧಿಸಿದ್ದಾರೆ.